ಹಿರೀಸಾವೆ: ಹೋಬಳಿಯ ಕಬ್ಬಳಿ ಗ್ರಾಮದ ತೋಟದ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ಅನ್ನಭಾಗ್ಯದ 34 ಕ್ವಿಂಟಲ್ ರಾಗಿಯನ್ನು ತಹಶೀಲ್ದಾರ್ ಜೆ.ಬಿ. ಮಾರುತಿಗೌಡ ಶನಿವಾರ ವಶಪಡಿಸಿಕೊಂಡಿದ್ದಾರೆ.
ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಶಿವಕುಮಾರ್ ತಮ್ಮ ತೋಟದ ಮನೆಯಲ್ಲಿ ಈ ರಾಗಿಯನ್ನು ಸಂಗ್ರಹಿಸಿದ್ದರು.
ಸಹಕಾರ ಸಂಘದಲ್ಲಿ ಪಡಿತರ ಚೀಟಿ ಮೂಲಕ ವಿತರಣೆ ಮಾಡಬೇಕಿದ್ದ ರಾಗಿಯನ್ನು ಸಂಘದ ದಾಸ್ತಾನು ಮಳಿಗೆಯಲ್ಲಿ ಇಡದೆ, ಈ ಮನೆಯಲ್ಲಿ ಇಟ್ಟಿದ್ದಾರೆ ಎಂಬ ಖಚಿತ ಮಾಹಿತಿ ಬಂದಾಗ ತಹಶೀಲ್ದಾರ್ ದಾಳಿ ಮಾಡಿದ್ದಾರೆ. 50 ಕೆಜಿಯ 68 ಚೀಲಗಳನ್ನು ಅಕ್ರಮ ದಾಸ್ತಾನು ಪತ್ತೆಯಾಗಿದೆ.
ಇವು ಪಡಿತರದಲ್ಲಿ ವಿತರಿಸುವ ರಾಗಿ ಎಂದು ತಾಲ್ಲೂಕು ಆಹಾರ ಶಿರಸ್ತೇದಾರ್ ಶಂಕರ್ ದೃಢೀಕರಿಸಿದ್ದಾರೆ. ಕಾನೂನು ಕ್ರಮಕ್ಕೆ ಹಿರೀಸಾವೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ತಹಶೀಲ್ದಾರ್ ಜೆ.ಬಿ. ಮಾರುತಿಗೌಡ ‘ಪ್ರಜಾವಾಣಿ’ ಗೆ ತಿಳಿಸಿದರು.
ಕಂದಾಯ ವೃತ್ತ ನಿರೀಕ್ಷಕ ಡಿ.ಎನ್. ವಿರಾಜ್, ಎಎಸ್ಐ ಸುಬ್ರಹ್ಮಣ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ದಾಳಿಯಲ್ಲಿ ಭಾಗವಹಿಸಿದ್ದರು.