ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕಿ ವೇತನ ಬಿಡುಗಡೆಗೆ ಆಗ್ರಹ

ಜಿಲ್ಲಾ ಪಂಚಾಯಿತಿ ಎದುರು ಗ್ರಾಮ ಪಂಚಾಯಿತಿ ನೌಕರರ ಧರಣಿ
Last Updated 27 ಮೇ 2019, 14:53 IST
ಅಕ್ಷರ ಗಾತ್ರ

ಹಾಸನ: ಹಲವು ತಿಂಗಳ ಬಾಕಿ ವೇತನ ಕೂಡಲೇ ಬಿಡುಗಡೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ನಡೆಸಿದರು.

ಕನಿಷ್ಟ ವೇತನ ನೀಡುವುದು, ಬಾಕಿ ಉಳಿದಿರುವ ನೌಕರರನ್ನು ಇಎಫ಼್‌ಎಂಎಸ್‌ಗೆ ಸೇರಿಸುವುದು ಮತ್ತು ನೌಕರರ ವೇತನಕ್ಕೆ ತಕ್ಕಂತೆ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಗ್ರಾಮ ಪಂಚಾಯಿತಿಯ 61 ಸಾವಿರ ನೌಕರರಿಗೆ ಕನಿಷ್ಟ ವೇತನ ಮತ್ತು ತುಟ್ಟಿಭತ್ಯೆ ಸೇರಿಸಿ ಪ್ರತಿ ತಿಂಗಳು ವೇತನಕ್ಕಾಗಿ ವರ್ಷಕ್ಕೆ ₹ 830 ಕೋಟಿ ಹಣ ಬೇಕಾಗುತ್ತದೆ. ಆದರೆ, ಈ ಹಣದಲ್ಲಿ ರೈತರ ಸಾಲ ಮನ್ನಾಕ್ಕಾಗಿ ₹ 312 ಕೋಟಿ ಹಣವನ್ನು ಬಳಸಿಕೊಂಡ ಪರಿಣಾಮವಾಗಿ ನೌಕರರಿಗೆ ಹಲವು ತಿಂಗಳ ವೇತನ ಬಿಡುಗಡೆಯಾಗಿಲ್ಲ ಎಂದು ದೂರಿದರು.

ನೌಕರರ ವೇತನಕ್ಕಾಗಿ ಬೇಕಾಗುವ ಹೆಚ್ಚುವರಿ ಹಣಕ್ಕಾಗಿ ಈಗಾಗಲೇ ಸರ್ಕಾರಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಅವರು ಹಣಕಾಸು ಇಲಾಖೆಗೆ ಪತ್ರ ಬರೆದಿದ್ದಾರೆ. ಸರ್ಕಾರದಿಂದ ನೌಕರರ ವೇತನಕ್ಕೆ ನಿಗದಿಯಾಗಿರುವ ಹಣ ಬರದೆ ಪಂಚಾಯಿತಿ ನೌಕರರ ವೇತನದ ಸಮಸ್ಯೆ ಬಗೆಹರಿಯುವುದಿಲ್ಲ ಎಂದು ಅಲವತ್ತುಕೊಂಡರು.

ಬಾಕಿ ಉಳಿದಿರುವ 18 ಸಾವಿರ ಗ್ರಾಮ ಪಂಚಾಯಿತಿ ನೌಕರರ ಸೇವಾ ವಿವರಗಳನ್ನು ಇಎಫ಼್‌ಎಂಎಸ್‌ಗೆ ಸೇರಿಸಲು ಅಧಿಕಾರಿಗಳು ಮುತುವರ್ಜಿ ವಹಿಸುತ್ತಿಲ್ಲ. ಇದರಿಂದಾಗಿ ಈ ನೌಕರರಿಗೆ ಸರ್ಕಾರ ಹಾಗೂ ಗ್ರಾಮ ಪಂಚಾಯಿತಿಗಳೂ ಕೂಡ ವೇತನ ನೀಡುತ್ತಿಲ್ಲ. ಈ ನೌಕರರಿಗೆ ಗ್ರಾಮ ಪಂಚಾಯಿತಿಯ ತೆರಿಗೆ ವಸೂಲಾತಿ ಹಣದಲ್ಲೇ ಕನಿಷ್ಟ ವೇತನ ಪಾವತಿಸುವಂತೆ ಸರ್ಕಾರದ ಸ್ಪಷ್ಟ ಆದೇಶವಿದ್ದರೂ ಅನ್ಯಾಯ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪಂಚಾಯಿತಿಗಳಲ್ಲಿ ಕೆಲಸ ಮಾಡುತ್ತಿರುವ ಹೆಚ್ಚುವರಿ ಬಿಲ್‌ ಕಲೆಕ್ಟರ್, ಹೆಚ್ಚುವರಿ ಕ್ಲರ್ಕ್, ಹೆಚ್ಚುವರಿ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳ ಅನುಮೋದನೆಗೂ ತೊಂದರೆಯಾಗಿದೆ ಎಂದರು.


ಅಲ್ಲದೇ 10 ಸಾವಿರಕ್ಕೂ ಹೆಚ್ಚು ಕಸಗುಡಿಸುವ ನೌಕರರಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ 5 ಸಾವಿರ ಜನಸಂಖ್ಯೆಗೆ ಒಬ್ಬ ಕಸ ಗುಡಿಸುವವರು ಎನ್ನುವ ಲೆಕ್ಕಾಚಾರವೇ ಅವೈಜ್ಞಾನಿಕವಾಗಿದೆ. ಪುರಸಭೆ, ನಗರ ಸಭೆಗಳಲ್ಲಿ ಇರುವಂತೆ ಹಾಗೂ ಐ.ಪಿ.ಡಿ. ಸಾಲಪ್ಪ ವರದಿಯಂತೆ 700 ಜನಸಂಖ್ಯೆಗೆ ಒಬ್ಬ ಕಸಗುಡಿಸುವವರನ್ನು ನೇಮಕ ಮಾಡಬೇಕು ಎಂದು ಆಗ್ರಹಿಸಿದರು.

ಸರ್ಕಾರ ಕೂಡಲೇ 61 ಸಾವಿರ ಪಂಚಾಯಿತಿ ನೌಕರರ ವೇತನಕ್ಕೆ ಅಗತ್ಯವಿರುವ ಹಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ವಿಜಯಪ್ರಕಾಶ್‌ಗೆ ಮನವಿ ಸಲ್ಲಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಖಜಾಂಚಿ ಕೆ. ಕುಮಾರಸ್ವಾಮಿ, ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಗ್ರಾಮ ಪಂಚಾಯತಿ ನೌಕರರ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT