ಬೇಲೂರು: ಪ್ರವಾಸಿಗರನ್ನು ಸೆಳೆಯುವ ದೃಷ್ಟಿಯಿಂದ ಬೈಕ್ ಜಾಥಾದ ಮೂಲಕ ಈ ಬಾರಿಯ ಪ್ರವಾಸೋದ್ಯಮ ದಿನವನ್ನು ವಿಶೇಷವಾಗಿ ಆಚರಿಲಾಗುತ್ತಿದೆ ಎಂದು ಪ್ರವಾಸೋದ್ಯಮ ಇಲಾಖೆ ಉಪನಿ ರ್ದೇಶಕ ಎ.ಬಿ.ಸಂಜಯ್ ಹೇಳಿದರು.
ಇಲ್ಲಿನ ಚನ್ನಕೇಶವಸ್ವಾಮಿ ದೇವಸ್ಥಾನದ ಆವರಣಕ್ಕೆ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಬೈಕ್ ಜಾಥಾದೊಂದಿಗೆ ಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹಾಸನದಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಈ ಜಾಥಾ ಉದ್ಘಾಟಿಸಿದ್ದಾರೆ. ಬುಲ್ ಟಸ್ಕರ್ ಸಂಸ್ಥೆಯ 30 ಬೈಕ್, ಸವಾರರು ಜಾಥಾದಲ್ಲಿ ಭಾಗವಹಿಸಿದ್ದಾರೆ. ಜಿಲ್ಲೆಯ ಪ್ರವಾಸಿತಾಣಗಳಲ್ಲಿ ಈ ಜಾಥಾ ಸಂಚರಿಸಲಿದೆ. ಪ್ರವಾಸಿಗರು ಮಾಸ್ಕ್, ಸ್ಯಾನಿಟೈಸರ್ ಉಪಯೋಗಿಸಿ, ಅಂತರ ಕಾಪಾಡಿಕೊಂಡು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು ಎಂದರು.
ತಹಶೀಲ್ದಾರ್ ನಟೇಶ್ ಮಾತನಾಡಿ, ಜಿಲ್ಲೆಯ ಪ್ರವಾಸೋದ್ಯಮವನ್ನು ಚುರುಕುಗೊಳಿಸಲು ಬೈಕ್ ಜಾಥಾ, ಪ್ರವಾಸಿ ತಾಣ ಸ್ವಚ್ಛಗೊಳಿಸುವ ಅಭಿಯಾನ ನಡೆಸಲಾಗುತ್ತಿದೆ ಎಂದರು.
ಚನ್ನಕೇಶವಸ್ವಾಮಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಉಮಾ, ಬುಲ್ ಟಸ್ಕರ್ ಸಂಸ್ಥೆಯ ನಿಖಿಲ್, ತಿಲಕ್, ಕಿರಣ, ಪ್ರಮೋದ್, ಪ್ರವಾಸೋದ್ಯಮ ಇಲಾಖೆಯ ನಾಗರಾಜು, ಹರೀಶ್, ಮಾರ್ಗದರ್ಶಿಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಾರಾನಾಥ್, ತಾಲ್ಲೂಕು ಅಧ್ಯಕ್ಷ ಸುಧೀಂದ್ರ, ಪುರಸಭೆ ಆರೋಗ್ಯಾಧಿಕಾರಿ ಲೋಹಿತ್ ಇದ್ದರು.