ಹಾಸನ: ಲಾಂಛನ, ಗಡಿ, ಭಾಷೆ, ಧರ್ಮಕ್ಕೆ ನೀಡುವಷ್ಟು ಆದ್ಯತೆಯನ್ನು ಜೀವಕ್ಕೆ ನೀಡುತ್ತಿಲ್ಲ ಎಂದು ಚಲನಚಿತ್ರ ಪೋಷಕ ನಟ ಅಚ್ಚುತ್ ಕುಮಾರ್ ಹೇಳಿದರು.
ನಗರದ ಸಂಸ್ಕೃತ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಲೇಖಕಿ ಜ.ನಾ. ತೇಜಶ್ರೀ ಅವರ 'ಬೆಳ್ಳಿ ಮೈ ಹುಳ' ಕಥಾ ಸಂಕಲನ ಹಾಗೂ 'ಲೂಯಿಸ್ ಗ್ಲಿಕ್' ಅನುವಾದ ಕೃತಿ ಬಿಡುಗಡೆ ಮಾಡಿ ಮಾತನಾಡಿ,ವಿಚಾರವಾದಿ ಜ.ಹೊ. ನಾರಾಯಣಸ್ವಾಮಿ ಅವರ ಆದರ್ಶಗಳನ್ನು ಪುತ್ರಿ ಜ.ನಾ.ತೇಜಶ್ರೀಸಂಪೂರ್ಣ ಅಳವಡಿಸಿಕೊಂಡಿದ್ದಾರೆ ಎಂಬುದಕ್ಕೆ ಅವರ ಕೃತಿಗಳೇ ಸಾಕ್ಷಿ. ಸಮಾಜದಲ್ಲಿ ಪೋಷಕರುಮಕ್ಕಳಿಗೆ ಏನನ್ನು ಬಿಟ್ಟುಕೊಡಬೇಕು ಎಂಬುದನ್ನು ಜಹೊನಾ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಮನುಷ್ಯರೇ ಸೃಷ್ಟಿಸಿಕೊಂಡಿರುವ ಸಮಾಜ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ಮಕ್ಕಳಿಗೆ ಏನನ್ನು ಹೇಳಿಕೊಡಬೇಕೆಂಬ ಆತಂಕಕ್ಕೆ ಪ್ರಸ್ತುತ ದಿನಗಳು ಸಿಲುಕಿಸಿವೆ ಎಂದರು.
ಇಲ್ಲಿ ಜೀವಕ್ಕೆ ಬೆಲೆಯಿಲ್ಲದಾಗಿದೆ. ಒಂದು ಜೀವ ಇನ್ನೊಂದು ಜೀವವನ್ನು ಕಾಪಾಡಬೇಕು. ಮತ್ತೊಂದು ಜೀವವನ್ನು ಹೇಗೆ ಪ್ರೀತಿಸಬೇಕು ಹಾಗೂ ಕಾಣಬೇಕು ಎಂಬುದರ ತಿರುಳನ್ನು ಬೆಳ್ಳಿ ಮೈ ಹುಳ ಕಥಾ ಸಂಕಲನ ಒಳಗೊಂಡಿದೆ ಎಂದು ವಿವರಿಸಿದರು.
ರಂಗಭೂಮಿ ಕಲಾವಿದೆ ನಂದಿನಿ ಪಟವರ್ಧನ್ಮಾತನಾಡಿ, ಗ್ಲಿಕ್ ಲೂಯಿಸ್ ಕೃತಿಯನ್ನು ಕನ್ನಡಕ್ಕೆ ತರುವಲ್ಲಿ ತೇಜಶ್ರೀ ಅವರ ಶ್ರಮ ಸಾಕಷ್ಟಿದೆ. ಗ್ರಿಕ್ನ ಪುರಾಣ, ಇತಿಹಾಸ, ಸಂಸ್ಕೃತಿ ಹಾಗೂ ಆಚಾರ ವಿಚಾರಗಳ ಅಧ್ಯಯನ ಮಾಡಿದರಷ್ಟೇ ಇಂತಹ ಅತ್ಯುತ್ತಮ ಕೃತಿ ಪ್ರಕಟಿಸಲು ಸಾಧ್ಯ ಎಂದು ನುಡಿದರು.
ಕಥೆಗಾರ ಮುದಿರಾಜ್ ಬಾಣದ್ ಮಾತನಾಡಿದರು. ತೇಜಶ್ರೀ ನಿರೂಪಿಸಿದರು. ಶಿಕ್ಷಕಿ ನಾಝಿಮಾ ಎಚ್.ಎಂ. ಅವರು ಶ್ರೀರಾಮಾಯಣ ದರ್ಶನಂ ಒಂದು ಭಾಗದ ಅಭಿನಯ ಪರಿಚಯ ಮಾಡಿದರು.