ಹಿರೀಸಾವೆ (ಹಾಸನ): ಮಟ್ಟನವಿಲೆ ಸಮೀಪದ ಕಗ್ಗೆರೆ ರಸ್ತೆಯಲ್ಲಿ, ವ್ಯಕ್ತಿಯೊಬ್ಬರನ್ನು ಕೊಲೆಗೈದು, ಶವವನ್ನು ಕಾರಿನಲ್ಲಿಟ್ಟು ಸುಟ್ಟು ಹಾಕಿರುವ ಪ್ರಕರಣ ಬುಧವಾರ ಬೆಳಕಿಗೆ ಬಂದಿದೆ.
ಬೆಳಿಗ್ಗೆ ಜಮೀನಿಗೆ ಬಂದವರು ಹೊಗೆಯಾಡುತ್ತಿರುವುದನ್ನು ಕಂಡು, ಹತ್ತಿರ ಹೋಗಿ ನೋಡಿದ್ದಾರೆ. ಕಾರು ಸಂಪೂರ್ಣ ಸುಟ್ಟು ಹೋಗಿದೆ. ಡಿಕ್ಕಿಯಲ್ಲಿ, ಗುರುತು ಸಿಗದಷ್ಟು ಬೆಂದು ಹೋಗಿರುವ ಮೃತ ದೇಹವೊಂದು ಪತ್ತೆಯಾಗಿದೆ. ಅವರು ತಕ್ಷಣ ಹಿರೀಸಾವೆ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ.
ಹಿರೀಸಾವೆ ಎಸ್ಐ ಶ್ರೀನಿವಾಸ್ ಮತ್ತು ಸಿಬ್ಬಂದಿ ಭೇಟಿ ನೀಡಿ, ಅಲ್ಪ– ಸ್ವಲ್ಪ ಇದ್ದ ಬೆಂಕಿಯನ್ನು ನಂದಿಸಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಎಸ್ಪಿ ಆರ್. ಶ್ರೀನಿವಾಸಗೌಡ, ‘ಟೊಯೊಟಾ ಇತಿಯೋಸ್ ಕಾರು ಇದಾಗಿದ್ದು, ಸುಟ್ಟು ಕರಕಲಾಗಿರುವ ದೇಹ ಮಹಿಳೆಯದೇ, ಪುರುಷನದೇ ಎಂಬುದನ್ನು ಗುರುತಿಸಲು ಸಾಧ್ಯವಾಗಿಲ್ಲ. ಮುಂದಿನ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಹಾಸನದ ಮೆಡಿಕಲ್ ಕಾಲೇಜಿಗೆ ಸಾಗಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.