ಹಾಸನ: ‘ಹಿಂದೂಗಳ ಮನೆಯ ಹಟ್ಟಿ ಹಾಗೂ ಅಂಗಳಕ್ಕೆ ಯಾರಾದರೂ ಜಿಹಾದಿಗಳು, ಮೀನಿನ ವ್ಯಾಪಾರಿಗಳು, ತರಕಾರಿ ವ್ಯಾಪಾರಿಗಳು ಬರಬೇಕಾದರೆ ಎಚ್ಚರಿಕೆಯಿಂದ ಇರಿ. ನಮ್ಮಲ್ಲಿರುವಂತಹ ಕೋವಿಗಳು ಹೊರಬರಲಿವೆ’ ಎಂದು ಬಜರಂಗ ದಳದ ರಾಜ್ಯ ಸಹ ಸಂಚಾಲಕ ರಘು ಎಚ್ಚರಿಕೆ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ರಘು ಬಂಧನಕ್ಕೆ ಹುಡುಕಾಟ ಆರಂಭಿಸಿದ್ದಾರೆ.
ಎಮ್ಮೆಯನ್ನು ಗುಂಡಿಕ್ಕಿ ಕೊಂದ ಘಟನೆ ಖಂಡಿಸಿ ಶುಕ್ರವಾರ ಸಕಲೇಶಪುರದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ್ದ ರಘು, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಗೋಹತ್ಯೆ ನಿಷೇಧ ಕಾಯ್ದೆಯನ್ನು ಹಿಂಪಡೆಯುವುದಾಗಿ ಹೇಳಿದೆ. ಆದರೆ, ಬಜರಂಗ ದಳದ ಕಾರ್ಯಕರ್ತರು ಗೋವುಗಳನ್ನು ರಕ್ಷಣೆ ಮಾಡಿಯೇ ಮಾಡುತ್ತಾರೆ’ ಎಂದು ಹೇಳಿದ್ದಾರೆ.
‘ಮುಸ್ಲಿಮರನ್ನು ಗುಂಡು ಹಾರಿಸಿ ಕೊಲ್ಲುವುದಾಗಿ ಬಹಿರಂಗವಾಗಿ ಹೇಳಿರುವ ಸಕಲೇಶಪುರದ ರಘು ಎಂಬ ಸಮಾಜಘಾತಕನನ್ನು ಪೊಲೀಸರು ಕೂಡಲೇ ಬಂಧಿಸಬೇಕು’ ಎಂದು ಸಿಪಿಐಎಂ ಹಾಸನ ಜಿಲ್ಲಾ ಸಮಿತಿ ಕಾರ್ಯದರ್ಶಿ ಧರ್ಮೇಶ್ ಆಗ್ರಹಿಸಿದ್ದಾರೆ.
‘ಆತನ ಮೇಲೆ ಕೊಲೆಗೆ ಪ್ರಚೋದನೆ, ಭಯೋತ್ಪಾದನೆ ಹಾಗೂ ಕೋಮು ಗಲಭೆಗೆ ಪ್ರಚೋದನೆ ನೀಡಿಕೆಗೆ ಸಂಬಂಧಿಸಿದ ಕಾಯ್ದೆಗಳ ಅನ್ವಯ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕು’ ಎಂದು ಒತ್ತಾಯಿಸಿದ್ದಾರೆ.
‘ರಘು ವಿರುದ್ಧ ಪ್ರಚೋದನಕಾರಿ ಭಾಷಣ ಹಾಗೂ ಧರ್ಮಗಳ ನಡುವೆ ದ್ವೇಷ ಬಿತ್ತುವ ಪ್ರಯತ್ನ ಮಾಡಲಾಗಿದೆ ಎಂದು ಸಕಲೇಶಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ’ ಎಂದು ಡಿವೈಎಸ್ಪಿ ಎಚ್.ಎನ್. ಮಿಥುನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.