ಸಕಲೇಶಪುರ: ಇಲ್ಲಿಯ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಅಂಗವಾಗಿ ಸೋಮವಾರ ಚಂಡಿಕಾಹೋಮ ನಡೆಯಿತು.
ಬೆಳಿಗ್ಗೆ ದೇವಿಗೆ ವಿಶೇಷ ಅಭಿಷೇಕ ಮಾಡಲಾಗಿತ್ತು. ಮಹಾ ಸಂಕಲ್ಪದೊಂದಿಗೆ ಸುಮಾರು 3 ಗಂಟೆ ಕಾಲ ದೇವಸ್ಥಾನದ ಹಿರಿಯ ಅರ್ಚಕ ನರಹರಿಭಟ್ ಹೋಮ ಹವನ ನಡೆಸಿದರು. ದೇವಿಗೆ ತುಂಬಾ ಆಕರ್ಷಣೀಯವಾಗಿ ಸುವರ್ಣ ಕವಚ ಅಲಂಕಾರ ಮಾಡಲಾಗಿತ್ತು.
ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿ.ಪಂ. ಸದಸ್ಯೆ ಹಾಗೂ ಚಂಚಲಕುಮಾರಸ್ವಾಮಿ, ಪಿಡಬ್ಲೂಡಿ ಎಇಇ ಸೋಮಶೇಖರ್, ಎಂಜಿನಿಯರ್ ವೆಂಕಟೇಶ್, ಪುರಸಭಾ ಸದಸ್ಯರು, ಕನ್ನಿಕಾಪರಮೇಶ್ವರಿ ದೇವಸ್ಥಾನ ಸಮಿತಿ ಹಾಗೂ ವಾಸವಿ ಮಹಿಳಾ ಮಂಡಳಿ ಸದಸ್ಯರು ಇದ್ದರು.
9 ದಿನಗಳಿಂದ ದೇವಸ್ಥಾನದಲ್ಲಿ ವಿವಿಧ ಹೋಮ, ದೇವಿಗೆ ವಿವಿಧ ಅಲಂಕಾರ ಮಾಡುವ ಮೂಲಕ ನವರಾತ್ರಿ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕೋವಿಡ್ –19 ಹಿನ್ನೆಲೆಯಲ್ಲಿ ಹೆಚ್ಚು ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.
ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ಅರ್ಚಕ ಶ್ರೀಕಾಂತ್ 9 ದಿನ ದೇವಿಗೆ ವಿಶೇಷ ಅಲಂಕಾರ ಮಾಡುವ ಮೂಲಕ ನವರಾತ್ರಿ ಪೂಜಾ ಕಾರ್ಯಗಳನ್ನು ಸರಳವಾಗಿ ನಡೆಸಿದರು.
ಹೊಳೆಮಲ್ಲೇಶ್ವರಸ್ವಾಮಿ ದೇವಸ್ಥಾನದಲ್ಲಿಯೂ ಸಹ ಪ್ರತಿ ವರ್ಷದಂತೆ ಈ ಬಾರಿಯೂ ಸಹ ಅರ್ಚಕ ಮಹೇಶ್ ಭಟ್ ವಿವಿಧ ಹೋಮ, ದೇವಿಗೆ ವಿವಿಧ ಅಲಂಕಾರ ಮಾಡಿ ಪೂಜೆ ಸಲ್ಲಿಸಿದರು.
ಹಳೆ ಬಸ್ ನಿಲ್ದಾಣ ಹಿಂಭಾಗದ ಚಾಮುಂಡೇಶ್ವರಿ ದೇವಸ್ಥಾನ, ಚಂಪಕನಗರ ಬಡಾವಣೆಯ ಪಂಚಮುಖಿ ದೇವಸ್ಥಾನ, ಅಯಪ್ಪಸ್ವಾಮಿ ದೇವಸ್ಥಾನ, ಮಳಲಿ ಚಾಮುಂಡೇಶ್ವರಿ ದೇವಸ್ಥಾನ, ಬಾಳೇಗದ್ದೆ ಗುಹೆಕಲ್ಲಮ್ಮ ದೇವಸ್ಥಾನಗಳಲ್ಲಿಯೂ ಸಹ 9 ದಿನ ಶರನ್ನವರಾತ್ರಿ ಪೂಜಾ ಕಾರ್ಯಗಳನ್ನು ಸರಳವಾಗಿ ಮಾಡಿದರು.