ಹಾಸನ: ನಗರದ ಚಿಕ್ಕಹೊನ್ನೇನಹಳ್ಳಿ ಜಯನಗರ ಬಡಾವಣೆಯಲ್ಲಿ ಭಾನುವಾರ ಮಧ್ಯಾಹ್ನ ಮಕ್ಕಳು ಹೊರಗೆ ಆಟ ಆಡುತ್ತಿದ್ದರು. ಎದುರಿನ ನಿವೇಶನದಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನೋಡಿದ ಮಕ್ಕಳಿಗೆ ಜ್ಞಾಪಕ ಬಂದಿದ್ದು ಅಲ್ಲಿಯೇ ವಾಸಿಸುತ್ತಿದ್ದ ಪುಟ್ಟ ನಾಯಿ ಮರಿಗಳು.
ಅವುಗಳಿಗೆ ಏನು ಆಗಿರಬಹುದು ಎಂದು ಆತಂಕದಿಂದಲೇ ಸ್ಥಳಕ್ಕೆ ಧಾವಿಸಿದರು. ಆ ಮಕ್ಕಳಿಗೆ ಒಂದು ಆಘಾತ ಕಾದಿತ್ತು,ಅಲ್ಲಿ ಹೊತ್ತಿಕೊಂಡಿದ್ದ ಬೆಂಕಿ ನಾಯಿ ಮರಿಗಳು ಇರುವ ಗೂಡಿನ ಹತ್ತಿರಕ್ಕೆ ಬಂದು ಬಿಟ್ಟಿತ್ತು.
ಇದನ್ನು ಕಂಡ ಮಾಧವ್ ಮತ್ತು ಹರ್ಷಿತ್ ಜೋರಾಗಿ ಕಿರುಚಲು ಆರಂಭಿಸಿದರು. ಧನ್ವಿನ್, ಮಕ್ಕಳ ಸಹಾಯಕ್ಕೆ ಧಾವಿಸಿದರು. ತಕ್ಷಣ ಗೂಡಿಗೆ ಆವರಿಸಿದ್ದ ಬೆಂಕಿಯನ್ನು ಕೋಲಿನಿಂದ ತೆಗೆದು, 4 ನಾಯಿ ಮರಿಗಳನ್ನು ಎಳೆದು, ಈಚೆಗೆ ತಂದಿದ್ದಾನೆ.
ನಂತರ ಅಲ್ಲಿಗೆ ಬಂದ ಜನರು ನೀರು ಹಾಕಿ ಬೆಂಕಿ ನಂದಿಸಿದರು. ಇದರಲ್ಲಿದ್ದ ಮತ್ತೊಂದು ಪುಟ್ಟ ನಾಯಿ ಮರಿಗೆ ಬೆಂಕಿಯ ಶಾಖ ತಟ್ಟಿತ್ತು. ಆದರೂ ಧನ್ವಿನ್ ಅದನ್ನು ಕಷ್ಟಪಟ್ಟು ಹೊರಕ್ಕೆ ತೆಗೆದಿದ್ದಾನೆ. ಆ ನಾಯಿ ಮರಿಗೆ ನೀರನ್ನು ಹಾಕಿ ತಣ್ಣಗೆ ಮಾಡಲಾಯಿತು. ಎಲ್ಲರೂ ಸೇರಿ ನಾಯಿ ಮರಿಗಳಿಗೆ ಶುಶ್ರೂಷೆ ಮಾಡಿದರು.
ಈ ನಾಯಿ ಮರಿಗಳಿಗೆ ಸರಿಯಾದ ಜಾಗವನ್ನು ಹುಡುಕಿ, ಅಲ್ಲಿಗೆ ಮರಿಗಳನ್ನು ತಲುಪಿಸಿದರು. ಈಗ ಅಲ್ಲಿಗೆ ಬಂದ ಆ ನಾಯಿ ಮರಿಗಳ ಅಮ್ಮ ಸಂತಸಪಟ್ಟಿತು.
ಮಾಧವ್ ಮತ್ತು ಹರ್ಷಿತ್ ಮೂರನೇ ತರಗತಿಯಲ್ಲಿ ಹಾಗೂ ಧನ್ವಿನ್ ಎಂಟನೇ ತರಗತಿಗಳಲ್ಲಿ ವಿಜಯ ಶಾಲೆಯಲ್ಲಿ ಓದುತ್ತಿದ್ದಾರೆ. ಮಕ್ಕಳ ಈ ಸಾಹಸಕ್ಕೆ ಸುತ್ತಲಿನ ಜನರು ಮೆಚ್ಚುಗೆ ವ್ಯಕ್ತಪಡಿಸಿದರು.