ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಪಳಿರಹಿತ ಸೈಕಲ್‌ ಆವಿಷ್ಕಾರ

ಬಾಹುಬಲಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಮಾದರಿಗಳ ಪ್ರದರ್ಶನ
Last Updated 19 ಮೇ 2019, 10:37 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಇಲ್ಲಿಯ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಎಂಜಿನಿಯರಿಂಗ್‌ ವಿದ್ಯಾರ್ಥಿ ಗಳ ಆವಿಷ್ಕರಿಸಿದ ಉಪಕರಣಗಳು ಗಮನ ಸೆಳೆದವು.

ಸಿವಿಲ್‌, ಮೆಕ್ಯಾನಿಕಲ್‌, ಕಂಪ್ಯೂಟರ್‌ ಸೈನ್ಸ್‌, ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿ ಕೇಷನ್‌ ಎಂಜಿನಿಯರಿಂಗ್‌ ಮತ್ತು ಇನ್ಫರ್ಮೇಷನ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು 47 ಮಾದರಿಗಳನ್ನು ಆವಿಷ್ಕರಿಸಿದ್ದಾರೆ. ಕಾಲೇಜಿನಲ್ಲಿ ಆಯೋಜಿಸಿದ್ದ ‘ಆವಿಷ್ಕಾರ– 19’ ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು.

ಚಾಕ್‌ ಡಸ್ಟರ್‌ ಕ್ಲೀನರ್‌: ಶಿಕ್ಷಕರು ಬೋರ್ಡ್‌ ಮೇಲೆ ಚಾಕ್‌ಪೀಸ್‌ನಿಂದ ಬರೆದು, ಅದನ್ನು ಅಳಿಸುವಾಗ ಬರುವ ದೂಳು ವಿದ್ಯಾರ್ಥಿಗಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ಚಾಕ್‌ ಡಸ್ಟರ್‌ ಕ್ಲೀನರ್‌ ಅನ್ನು ಮೆಕ್ಯಾನಿಕಲ್‌ ವಿಭಾಗದ ವಿದ್ಯಾರ್ಥಿಗಳಾದ ಅನಿಲ್‌ಕುಮಾರ್‌, ಮಂಜುನಾಥ್‌, ರಾಹುಲ್‌, ಸಚಿನ್‌ ಕಂಡುಹಿಡಿದಿದ್ದಾರೆ. ಈ ವಸ್ತುವು ಚಾಕ್‌ಪೀಸ್‌ನ ದೂಳನ್ನು ಸಂಗ್ರಹಿಸುತ್ತದೆ. ಉಪನ್ಯಾಸಕ ಎಂ.ಜೆ.ರಘು ಅವರು ಮಾರ್ಗದರ್ಶನ ನೀಡಿದ್ದಾರೆ.

ಟ್ರೀ ಬ್ರಾಂಚ್‌ ಟ್ರಿಮಿಂಗ್‌ ಮಿಷಿನ್‌: ಮರದ ರೆಂಬೆ, ಕೊಂಬೆಗಳನ್ನು ಕತ್ತರಿಸುವಂತಹ ಉಪಕರಣವನ್ನು ಮೆಕ್ಯಾನಿಕಲ್‌ ವಿಭಾಗದ ಸಚಿನ್‌, ಅಭಿಲಾಷ್‌, ಪವನ್‌, ಪ್ರಜ್ವಲ್‌ ಆವಿಷ್ಕರಿಸಿದ್ದಾರೆ. ಉಪನ್ಯಾಸಕ ಎನ್‌.ಮಂಜುನಾಥ್‌ ಮಾರ್ಗದರ್ಶನ ನೀಡಿದ್ದಾರೆ.

ವಾಹನ ಸ್ವಚ್ಛಗೊಳಿಸಲು ಬಳಸುವ ಸಾಬೂನುಮಿಶ್ರಿತ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅದನ್ನು ಪುನರ್‌ ಬಳಕೆ ಮಾಡುವಂತಹ ಸಾಧನವನ್ನು ಜಿ.ಎನ್‌.ನಿಹಾರ್‌, ಆರ್‌.ಮೋಹಿತ್‌ ಕುಮಾರ್‌, ಎಸ್‌.ಎನ್‌.ನಮಿತಾ ಜೈನ್‌, ಎಸ್‌.ಎನ್‌.ರೇಣು ಪ್ರಶಾಂತ್‌ ಅವರು ಸಹಾಯಕ ಪ್ರಾಧ್ಯಾಪಕ ಪಿ.ಕಿರಣ್‌ ಮಾರ್ಗದರ್ಶನದಲ್ಲಿ ಕಂಡುಹಿಡಿದಿದ್ದಾರೆ. ಡ್ರಮ್‌ಗಳಲ್ಲಿ ಶೇಖರಿಸಿ ಮರಳು ಮತ್ತು ಸಣ್ಣ ಜಲ್ಲಿಯ ಮುಖಾಂತರ ಹಾಯಿಸಲಾಗುತ್ತದೆ. ಕಲುಷಿತ ನೀರು ಬೇರ್ಪಟ್ಟು, ಸ್ವಚ್ಛ ನೀರು ದೊರೆಯುತ್ತದೆ.

ಪಡಿತರ ವಿತರಿಸುವ ಸಾಧನ

ಪಡಿತರ ವಿತರಣೆ ಸಂದರ್ಭದಲ್ಲಿ ತೂಕದಲ್ಲಿ ಆಗುವ ಮೋಸವನ್ನು ತಪ್ಪಿಸುವ ಉದ್ದೇಶದಿಂದ ಎಚ್‌.ಆರ್‌.ಅಪೂರ್ವ, ಡಿ.ಎಸ್‌.ಚಂದನ, ಎಚ್‌.ಆರ್‌.ಸುಪ್ರೀತ್‌ ‘ಸ್ವಯಂಚಾಲಿತ ಪಡಿತರ ವಿತರಣೆ ವ್ಯವಸ್ಥೆಯ ಸಾಧನ’ವನ್ನು ಕಂಡು ಹಿಡಿದಿದ್ದಾರೆ. ಆಧಾರ್‌ ಸಂಖ್ಯೆಯನ್ನು ನಮೂದಿಸುತ್ತಿದ್ದಂತೆ ಆ ಫಲಾನುಭವಿಗೆ ನೀಡಬೇಕಿರುವ ಪಡಿತರವನ್ನು ಸ್ವಯಂ ಚಾಲಿತವಾಗಿ ನೀಡುತ್ತದೆ. ಸಹಾಯಕ ಪ್ರಾಧ್ಯಾಪಕ ಶ್ರೇಯಸ್‌ ಸುಗ್ಗ ಮಾರ್ಗದರ್ಶನ ನೀಡಿದ್ದಾರೆ.

ಸುಲಭವಾಗಿ ತುಳಿಯ ಬಹುದಾದ ಸೈಕಲ್‌

ಬಿ.ಆರ್‌.ಕೌಶಿಕ್‌, ಜೆ.ಪ್ರದೀಪ್‌ಕುಮಾರ್‌, ಎಂ.ಎಸ್‌.ಸ್ವಾಮಿ, ಜಿ.ಎಸ್‌.ತೀರ್ಥಪ್ರಸಾದ್‌ ಅವರು ಸಹಾಯಕ ಪ್ರಾಧ್ಯಾಪಕ ಎಸ್‌.ಕೆ.ರಾಜೇಶ್‌ ಕುಂಬಾರ ಅವರ ಮಾರ್ಗದರ್ಶನದಲ್ಲಿ ಸರಪಳಿಸಹಿತ ಸೈಕಲ್‌ ಕಂಡುಹಿಡಿದಿದ್ದಾರೆ.

ಸರಪಳಿ ಬದಲಿಗೆ ಶಾಪ್ಟ್‌ ಬಳಕೆ ಮಾಡಲಾಗಿದೆ. ಇದರಿಂದ ಸುಲಭವಾಗಿ ಸೈಕಲ್‌ ತುಳಿಯಬಹುದು. ಶಾಪ್ಟ್‌ ಹಲ್ಲುಗಳು ಮುರಿದರೂ ಸುಲಭವಾಗಿ ಚಲಿಸಬಹುದು ಎಂದು ವಿದ್ಯಾರ್ಥಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT