ಶ್ರವಣಬೆಳಗೊಳ: ಕಾಂಗ್ರೆಸ್ ಪಕ್ಷವು, ಕೋವಿಡ್ನಿಂದ ನೊಂದವರಿಗೆ ಸಾಂತ್ವನ ಹೇಳುವುದನ್ನು ಬಿಟ್ಟು ಜನರಲ್ಲಿ ಭೀತಿ ಹುಟ್ಟಿಸುತ್ತ ಚಿಲ್ಲರೆ ರಾಜಕಾರಣ ಮಾಡುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಇಲ್ಲಿ ಆರೋಪಿಸಿದರು.
ಕೊರೊನಾ ಸೋಂಕು ನಿಯಂತ್ರಿಸಲು, ರಾಜ್ಯ ಸರ್ಕಾರವು ಹಗಲು–ರಾತ್ರಿ ಎನ್ನದೇ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಸರ್ಕಾರೇತರ ಸಂಸ್ಥೆಗಳೂ ಈ ಕೆಲಸದಲ್ಲಿ ಭಾಗಿಯಾಗಿವೆ. ಆದರೂ, ಕಾಂಗ್ರೆಸ್ನವರು ಹಗರಣ ಗಳು ನಡೆದಿದ್ದಾಗಿ ಹೇಳುತ್ತ ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಅವರು ದೂರಿದರು.
‘ಇಂದಿರಾ ಕ್ಯಾಂಟೀನ್ ತೆರೆದಾಗ ಹಗರಣ ನಡೆದಿಲ್ಲವೇ? ಲೆಕ್ಕ ಕೊಟ್ಟಿದ್ದಾರೆಯೇ?’ ಎಂದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ವಸತಿ ಯೋಜನೆಯಲ್ಲಿ ಅವ್ಯವಹಾರ ನಡೆದಿಲ್ಲವೇ ಎಂದು ಪ್ರಶ್ನಿಸಿದರು.
‘ಈ ದೇಶ, ರಾಜ್ಯವನ್ನು ಸುದೀರ್ಘ ಕಾಲ ಆಳಿರುವ ಕಾಂಗ್ರೆಸ್, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸರಿಯಾದ ಮೂಲಸೌಕರ್ಯ ಒದಗಿಸಿಲ್ಲ. ಪಕ್ಷಾಂತರದ ಬಗ್ಗೆ ಬೊಬ್ಬೆ ಹಾಕುವ ಆ ಪಕ್ಷ, ತುರ್ತು ಪರಿಸ್ಥಿತಿಯಲ್ಲಿ 20 ರಾಜ್ಯಗಳಿಗೆ ತೊಂದರೆ ಕೊಟ್ಟಿಲ್ಲವೇ?’ ಎಂದು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಹಾಸನ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಹುಲ್ಲಳ್ಳಿ ಸುರೇಶ್ ಇದ್ದರು.