ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌: ನರೇಗಾ ಯೋಜನೆಯಡಿ ಗ್ರಾಮಸ್ಥರಿಂದ ಕಾಲುವೆ ನಿರ್ಮಾಣ ಶುರು

ಭತ್ತದ ಗದ್ದೆ ಬೈಲಿಗೆ ನೀರು ಹಾಯಿಸಲು ಕಾಲುವೆ ಕಾಮಗಾರಿ
ಅಕ್ಷರ ಗಾತ್ರ

ಸಕಲೇಶಪುರ: ಲಾಕ್‌ಡೌನ್‌ನಲ್ಲಿ ಮನೆಯೊಳಗೆ ಸಮಯ ಕಳೆಯದೆ ಗ್ರಾಮ ಪ‍ಂಚಾಯಿತಿಯ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮಸ್ಥರು ಭತ್ತದ ಗದ್ದೆ ಬೈಲಿಗೆ ನೀರು ಹಾಯಿಸಲು ಸುಮಾರು ಒಂದೂ ಕಾಲು ಕಿ.ಮೀ. ಉದ್ದದ ಕಾಲುವೆ ನಿರ್ಮಾಣ ಕಾಮಗಾರಿ ಮಾಡುತ್ತಿರುವುದು ತಾಲ್ಲೂಕಿನ ಬಿರಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನ್ನಾಪುರ ಗ್ರಾಮದಲ್ಲಿ ಕಂಡು ಬಂದಿದೆ.

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ₹ 3 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಒಟ್ಟು 1,238 ಮೀಟರ್‌ ಉದ್ದ, ಒಂದು ಮೀಟರ್‌ ಆಳ ನಾಲ್ಕು ಅಡಿ ಅಗಲದ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಗ್ರಾ.ಪಂ. ಕೈಗೆತ್ತಿಕೊಂಡಿದೆ . ಈ ಒಂದು ಕಾಲುವೆಯಿಂದ ಹತ್ತಾರು ಎಕರೆ ಭತ್ತ ಬೆಳೆಯುವ ಗದ್ದೆಗಳಿಗೆ ನೀರು ಹರಿಸುವುದಕ್ಕೆ ಸಾಧ್ಯವಾಗಲಿದೆ. ಕಳೆದ ಎರಡು ದಶಕಗಳಿಂದ ಗ್ರಾಮಸ್ಥರು ಈ ಒಂದು ಕಾಲುವೆ ನಿರ್ಮಾಣ ಕಾಮಗಾರಿ ಮಾಡುವಂತೆ ಕೃಷಿ ಇಲಾಖೆ, ನೀರಾವರಿ ಇಲಾಖೆ, ಜಿಲ್ಲಾ ಪಂಚಾಯಿತಿ, ಶಾಸಕರು ಎಲ್ಲರಿಗೂ ಮೇಲಿಂದ ಮೇಲೆ ಮನವಿ ಸಲ್ಲಿಸುತ್ತಲೇ ಬಂದಿದ್ದರೂ ಯಾರಿಂದಲೂ ‌ಈ ಕೆಲಸ ಆಗಿರಲಿಲ್ಲ. ಗ್ರಾಮ ಪ‍ಂಚಾಯಿತಿಯಿಂದಲೇ ಈ ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ ಎಂದು ಗ್ರಾಮದ ಗೋಪಾಲ್‌ ಹೇಳುತ್ತಾರೆ.

ಈ ಗ್ರಾಮದಲ್ಲಿ ಸಣ್ಣ ಹಿಡುವಳಿದಾರರು ಹಾಗೂ ಕೂಲಿ ಕಾರ್ಮಿಕ ಕುಟುಂಬಗಳೇ ಹೆಚ್ಚು. ಹೀಗಾಗಿ ಗ್ರಾಮ ಪಂಚಾಯಿತಿ ಆಡಳಿತ ನರೇಗಾ ಯೋಜನೆ ಅಡಿಯಲ್ಲಿ ಕ್ರಿಯಾ ಯೋಜನೆ ರೂಪಿಸಿತ್ತು. ಲಾಕ್‌ಡೌನ್‌ನಿಂದಾಗಿ ಬೇರೆ ಗ್ರಾಮಗಳಿಗೆ ಹೋಗಿ ಕೆಲಸ ಮಾಡಲು ಸಾಧ್ಯವಿಲ್ಲದೆ ಇರುವ ಅವಕಾಶ ಸದ್ಬಳಕೆ ಮಾಡಿಕೊಂಡು ಈ ಕಾಮಗಾರಿ ಆರಂಭ ಮಾಡಲಾಗಿದೆ.
ಗ್ರಾ.ಪಂ. ಸದಸ್ಯರಾದ ಕೆ.ಬಿ. ಶಾರದಾ, ಜೆ.ಕೆ. ಸೋಮಶೇಖರ್‌ ಇವರೂ ಸಹ ಎರಡು ದಿನಗಳಿಂದ 17 ಮಂದಿ ಗ್ರಾಮಸ್ಥರೊಂದಿಗೆ ಸೇರಿಕೊಂಡು ಗುದ್ದಲಿ ಹಿಡಿದು ಕಾಲುವೆ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ.

ರೈತರಿಗಾಗಿ ₹ 11 ಲಕ್ಷದ ಕಾಮಗಾರಿ:‘ಗ್ರಾ.ಪಂ. ವತಿಯಿಂದ ನರೇಗಾ ಯೋಜನೆ ಅಡಿಯಲ್ಲಿ ರೈತರಿಗಾಗಿ ₹ 11 ಲಕ್ಷ ವೆಚ್ಚದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ವೈಯಕ್ತಿಕ ಕೃಷಿಹೊಂಡ, ಕಾಳುಮೆಣಸು ನಾಟಿ, ಅಡಿಕೆ ಗಿಡಗಳ ನಾಟಿ, ದನದ ಕೊಟ್ಟಿಗೆ ಹಾಗೂ ಇತರ ಕಾಮಗಾರಿಗಳು ಸೇರಿವೆ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಚ್‌.ಆರ್‌. ಗಿರೀಶ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT