ಹಾಸನ: "ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯಲ್ಲಿ ಉಗ್ರಾಣ ಇಲಾಖೆ ವ್ಯವಸ್ಥಾಪಕ ರಂಗಸ್ವಾಮಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು, ಇವರಿಗೆ ರಾಜಕಾರಣಿ ಬೆಂಬಲನೀಡುತ್ತಿದ್ದಾರೆ' ಎಂದು ಕೆಪಿಸಿಸಿ ಸದಸ್ಯ ಎಚ್.ಕೆ. ಮಹೇಶ್ ಆರೋಪಿಸಿದರು.
‘ಜಿಲ್ಲೆಯಾದಾದ್ಯಂತ 9 ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ. ಎಲ್ಲಾ ಜವಾಬ್ದಾರಿಯನ್ನು ರಂಗಸ್ವಾಮಿಗೆ ಬಿಡಲಾಗಿದ್ದು 50 ಕೆ.ಜಿ ರಾಗಿ ಪಡೆಯುವಲ್ಲಿ 52 ಕೆ.ಜಿ ಪಡೆದು 2 ಕೆ.ಜಿ ದೋಚುತ್ತಿದ್ದಾರೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
‘ಪ್ರತಿ ಕೆ.ಜಿ ಗೆ ₹33 ಬೆಲೆ ನಿಗದಿಪಡಿಸಿದ್ದು, 10 ಲಕ್ಷ ಚೀಲಕ್ಕೂ ಹೆಚ್ಚು ರಾಗಿ ಖರೀದಿಸಲಾಗಿದೆ. ಅಂದಾಜಿನ ಪ್ರಕಾರ ₹3 ಕೋಟಿ ಅವ್ಯವಹಾರವಾಗಿದೆ. ರೈತರ ನಕಲಿ ಪಹಣಿ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ’ ಎಂದು ಹೇಳಿದರು.
‘ಅಧಿಕಾರಿಗೆ ಜಿಲ್ಲೆಯ ಪ್ರಭಾವಿ ರಾಜಕಾರಣಿಯೊಬ್ಬರ ಬೆಂಬಲವಿದ್ದು, ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸೂಕ್ತ ತನಿಖೆ ನಡೆಸುವ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ’ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತರಾದ ಅಗಿಲೆ ಗುರುಪ್ರಸಾದ್, ಪ್ರವೀಣ್, ವಿನೋದ್, ಹೇಮಂತ್, ಯೋಗೇಶ್ ಇದ್ದರು.