ಚನ್ನರಾಯಪಟ್ಟಣ: ಪತ್ನಿಗೆ ಮೆಸೇಜ್ ಕಳುಹಿಸುತ್ತಿದ್ದ ಟೈಲರ್ನನ್ನು, ಆಕೆಯ ಪತಿ ಹಾಗೂ ಮೂವರು ಸೇರಿ ಪಟ್ಟಣದ ಹೊರವಲಯದಲ್ಲಿ ಗುರುವಾರ ಸಂಜೆ ಹೊಡೆದು ಕೊಲೆ ಮಾಡಿದ್ದಾರೆ.
ಟೈಲರ್ ವೃತ್ತಿ ನಡೆಸುತ್ತಿದ್ದ ಗಂಗಾಧರ ಗೋವಿಂದೇಗೌಡ (39) ಕೊಲೆಯಾದ ವ್ಯಕ್ತಿ. ಭರತ್, ಸೋಮು, ಅಭಿ ಹಾಗೂ ಇನ್ನೊಬ್ಬ ಅಪರಿಚಿತ ವ್ಯಕ್ತಿ ಸೇರಿ ಈ ಕೊಲೆ ಮಾಡಿದ್ದಾರೆ.
ಕೊಲೆಯಾದ ಗಂಗಾಧರ, ಆರೋಪಿ ಭರತ್ ಪತ್ನಿಗೆ ಮೆಸೇಜ್ ಕಳುಹಿಸಿದ್ದು, ಇದರಿಂದ ಕೆರಳಿದ ಭರತ್, ತನ್ನ ಸಹಚರರೊಂದಿಗೆ ಗಂಗಾಧರ ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋಗಿದ್ದ. ಪಟ್ಟಣದ ಹೊರವಲಯದ ಶ್ರವಣಬೆಳಗೊಳ ರಸ್ತೆಯಲ್ಲಿ ಆರೋಪಿಗಳು ಕಟ್ಟಿಗೆಯಿಂದ ಹೊಡೆದಿದ್ದಾರೆ.
ಕೊಲೆಯಾದ ಗಂಗಾಧರ ಸಂಬಂಧಿ ಕಾಂತರಾಜ್ ಸ್ಥಳಕ್ಕೆ ತೆರಳಿ ನೋಡಿದಾಗ, ಆರೋಪಿಗಳು ಹೊಡೆಯುತ್ತಿರುವುದು ಕಂಡು ಬಂದಿದೆ. ಕಾಂತರಾಜು ಅವರನ್ನು ಕಂಡ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಗಾಯಗೊಂಡಿದ್ದ ಗಂಗಾಧರ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಿದರು. ಆದರೆ, ಅಷ್ಟರಲ್ಲಿಯೇ ಗಂಗಾಧರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.
‘ಈ ಬಗ್ಗೆ ಗಂಗಾಧರ ಪತ್ನಿ ಸೌಮ್ಯಾ ಚನ್ನರಾಯಪಟ್ಟಣ ಠಾಣೆಗೆ ದೂರು ನೀಡಿದ್ದಾರೆ. ಆರೋಪಿಗಳ ಪತ್ತೆಗೆ ತಂಡ ರಚಿಸಲಾಗಿದೆ’ ಎಂದು ಎಸ್ಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.