ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಸಂಸ್ಕೃತಿಯ ಆರಾಧ್ಯ ದೇವಿಯ ಜಾತ್ರೆ

Last Updated 29 ಜನವರಿ 2018, 9:48 IST
ಅಕ್ಷರ ಗಾತ್ರ

ನಾಯಕನಹಟ್ಟಿ: ಬುಡಕಟ್ಟು ಸಮುದಾಯದ ಆರಾಧ್ಯ ದೇವತೆ ಕಾವಲು ಶ್ರೀಚೌಡೇಶ್ವರಿ ದೇವಿಯ ಜಾತ್ರೆ ಜನವರಿ 29ರಿಂದ 31ರವರೆಗೆ ಅದ್ದೂರಿಯಾಗಿ ನಡೆಯಲಿದ್ದು, ರಥೋತ್ಸವಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ.

ಪ್ರತಿವರ್ಷವೂ ಮಾಘಶುದ್ಧ ತ್ರಯೋದಶಿಯಂದು ಜಾತ್ರೆ ಆರಂಭವಾಗುತ್ತದೆ. ಅದರಂತೆ 29ರಂದು ಮಧ್ಯಾಹ್ನ 3 ಗಂಟೆಗೆ ಚೌಡೇಶ್ವರಿ ದೇವಿಯ ರಥಕ್ಕೆ ಕಳಸ ಸ್ಥಾಪನೆ ಮಾಡಲಾಗುವುದು. ನಂತರ ದೇವಿಗೆ ಗಂಗಾಪೂಜೆ ನೆರವೇರಿಸಿ ಸ್ವಸ್ತಿವಾಹನ, ಕಂಕಣಧಾರಣೆ, ಮಂಟಪಪೂಜೆ, ನವಗ್ರಹ ಆರಾಧನೆ ಕೈಗೊಳ್ಳಲಾಗುವುದು.

30ರಂದು ದೇವಾಯಲದ ಗುಡಿಕಟ್ಟಿನವರು ದೇವಿಗೆ ಹುಡಿಹಕ್ಕಿ ತುಂಬುವುದು, ಕಾಸು ಮೀಸಲು ಹರಕೆ ಒಪ್ಪಿಸಿ ಮಧ್ಯಾಹ್ನ 3ಗಂಟೆಗೆ ಚೌಡೇಶ್ವರಿ ದೇವಿಯನ್ನು ಸುಂದರವಾಗಿ ಅಲಂಕೃತಗೊಂಡ ರಥೋತ್ಸವದಲ್ಲಿ ಪ್ರತಿಷ್ಠಾಪಿಸಿ ಜಾತ್ರೆಗೆ ಚಾಲನೆ ನೀಡಲಾಗುವುದು. ನಂತರ ರಥವು ಪಾದಗಟ್ಟೆಗೆ ತೆರಳಿ ಸ್ವಸ್ಥಾನ ಸೇರುತ್ತದೆ.

31ರಂದು ವೀರ ಪೋತರಾಜರಿಂದ ಪೂಜಾ ವಿಧಿವಿಧಾನಗಳ ಕಾರ್ಯಕ್ರಮ, ಸಂಜೆ 4ಗಂಟೆಗೆ ಭಕ್ತರಿಂದ ಸಿಡಿ ಉತ್ಸವ, ಅಂತಿಮವಾಗಿ ದೇವಿಗೆ ಕಂಕಣ ವಿಸರ್ಜನೆ ಮೂಲಕ ಜಾತ್ರೆಗೆ ತೆರೆಬೀಳಲಿದೆ.

ಚೌಡೇಶ್ವರಿ ದೇವಿಯ ಐತಿಹ್ಯ 600ವರ್ಷಗಳ ಹಿಂದೆ ಸಿಂಗದೂರಿನಿಂದ ಬಂದ ಚೌಡೇಶ್ವರಿ ದೇವಿಯು ನಾಯಕನಹಟ್ಟಿ ದೊಡ್ಡಕೆರೆಯ ಸಮೀಪದಲ್ಲಿರುವ ಬೃಹತ್ ಈಚಲು ಅರಣ್ಯದಲ್ಲಿ ನೆಲೆನಿಂತು ಹುತ್ತಗಳಲ್ಲಿ ವಾಸ ಮಾಡುತ್ತಿರುತ್ತಾಳೆ. ಇದೇ ವೇಳೆ ಸಮೀಪದ ಗ್ರಾಮದ ಈಡಿಗ ಸಮುದಾಯದವರು ಈಚಲು ವನದಲ್ಲಿ ಸೇಂದಿಗಾಗಿ ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟುತ್ತಿರುತ್ತಾರೆ. ಹೀಗೆ ಒಂದುದಿನ ಅರಣ್ಯದ ತುಂಬೆಲ್ಲಾ ಹುತ್ತಗಳು ಬೆಳೆದು ನಿಂತಾಗ ಸಿಟ್ಟಿಗೆದ್ದ ಅವರು ಹುತ್ತಗಳನ್ನು ನಾಶ ಮಾಡಿ, ಈಚಲು ಮರಗಳಿಗೆ ಮಡಿಕೆಗಳನ್ನು ಕಟ್ಟಿ ಬರುತ್ತಾರೆ.

ಮರುದಿನ ಬಂದು ಮಡಿಕೆಗಳನ್ನು ನೋಡಿದರೆ ಒಂದು ಮಡಿಕೆಯಲ್ಲೂ ಹನಿ ಶೇಂಧಿಯು ಸಂಗ್ರಹವಾಗಿರುವುದಿಲ್ಲವಂತೆ. ಇದರಿಂದ ಭಯಗೊಂಡ ಅವರಿಗೆ ಸಾಧುವೊಬ್ಬ ‘ಇದು ದೇವಿಯ ಮಹಿಮೆ, ಮೊದಲು ಕ್ಷಮೆ ಕೇಳಿಕೊಳ್ಳಿ’ ಎಂದರಂತೆ. ಕ್ಷಮೆಯಾಚಿಸಿ ಪುಟ್ಟ ಕಲ್ಲಿನ ಗುಡಿಯನ್ನು ನಿರ್ಮಿಸಿದರಂತೆ. ಇದರಿಂದ ದೇವಿಯು ಸಂತೋಷಗೊಂಡು ಮರು ದಿವಸ ಈಚಲು ಮರಕ್ಕೆ ಕಟ್ಟಿದ ಎಲ್ಲಾ ಮಡಿಕೆಗಳಿಂದ ಸೇಂದಿ ತುಂಬಿ ಹರಿಯಿತು. ಅಂದಿನಿಂದ ಪ್ರತಿವರ್ಷವೂ ಜಾತ್ರೆ, ಪೂಜೆ ಪುನಸ್ಕಾರಗಳು ನಡೆದುಕೊಂಡು ಬಂದಿವೆ.

2002ರಿಂದ ಈಚಗೆ ನೂತನ ದೇವಾಲಯವನ್ನು ನಿರ್ಮಾಣಮಾಡಿ ವಿಜೃಂಭಣೆಯಿಂದ ಜಾತ್ರೆ, ಉತ್ಸವಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ ಎಂದು ದೇವಾಲಯ ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ಎಂ.ವೈ.ಟಿ,.ಸ್ವಾಮಿ ಹೇಳುತ್ತಾರೆ.

ಪುಷ್ಕರಣಿ ನೀರು ಸರ್ವರೋಗಕ್ಕೂ ಔಷಧಿ
400 ವರ್ಷಗಳ ಹಿಂದೆ ದೇವಾಲಯದ ಸಮೀಪದಲ್ಲಿ ಒಂದು ಪುಷ್ಕರಣೆಯನ್ನು ನಿರ್ಮಾಣ ಮಾಡಲಾಗಿದೆ. ಈ ಪುಷ್ಕರಣೆಯಲ್ಲಿ ಯಾವಾಗಲೂ ನೀರು ತುಂಬಿ ಸಮೃದ್ಧಿಯಾಗಿತ್ತು. ಅಂದು ಈ ಭಾಗದಲ್ಲಿ ಯಾವುದೇ ರೋಗರುಜಿನೆಗಳು, ಚರ್ಮರೋಗ ಕಂಡು ಬಂದರೆ ಇಲ್ಲಿನ ಪುಷ್ಕರಣೆಯ ನೀರಿನಿಂದ ಸ್ನಾನ ಮಾಡಿದರೆ ವಾಸಿಯಾಗುತ್ತಿತ್ತು ಎನ್ನುವ ಪ್ರತೀತಿ ಇದೆ.

ಪಶುಪಾಲನೆಗೆ ದೇವಿಯ ರಕ್ಷೆ
ಕೃಷಿಮೂಲ ಪರಂಪರೆಯ ಹಿನ್ನೆಲೆಯಲ್ಲಿ  ಜಾನುವಾರಿಗೆ ಯಾವುದೇ ರೋಗಗಳು ಬಂದರೂ ದೇವಿಯ ದೇಗುಲ ಪ್ರದಕ್ಷಿಣೆ ಮಾಡಿಸಿದರೆ ಸಾಕು ಪರಿಹಾರ ದೊರೆಯುತ್ತದೆ ಎನ್ನುವ ಬಲವಾದ ನಂಬಿಕೆ ಈ ಭಾಗದ ರೈತರಲ್ಲಿದೆ. ಹಾಗಾಗಿ ಇಂದಿಗೂ ಜಾತ್ರೆ ದಿನ ಸಂಜೆ ರೈತರು  ಜಾನುವಾರುಗಳ ಮೂಲಕ ದೇವಾಲಯಕ್ಕೆ ಪ್ರದಕ್ಷಿಣೆ ಹಾಕಿಸಿ ಆ ರಾತ್ರಿ ಅಲ್ಲಿಯೇ ತಂಗುತ್ತಾರೆ.

ಜತೆಗೆ ಮದುವೆಯಾಗದ ಯುವತಿಯರು, ಮಕ್ಕಳಾಗದ ಮಹಿಳೆಯರು, ಚಿಕ್ಕಮಕ್ಕಳಿಗೆ ಪ್ಲೇಗು, ಸಿಡಬು, ಸಾಂಕ್ರಮಿಕ ರೋಗಗಳಿಗೆ ದೇವಿಗೆ ಪರಿಹಾರ ನೀಡುತ್ತಾಳೆಂಬ ನಂಬಿಕೆ ಇದೆ. ಬೆಳೆದ ದವಸ ಧಾನ್ಯಗಳನ್ನು ಅರ್ಪಿಸಿ ಪರುವು ಮಾಡಿಕೊಂಡು ಹರಕೆ ಸಲ್ಲಿಸುತ್ತಾರೆ.

ನಾಯಕನಹಟ್ಟಿ ಹೋಬಳಿಯ ನೆಲಗೇತನಹಟ್ಟಿ, ಎತ್ತಿನಹಟ್ಟಿ, ಉಪ್ಪಾರಹಟ್ಟಿ, ಗೌಡಗೆರೆ, ದೇವರಹಟ್ಟಿ ಸೇರಿದಂತೆ ತಳುಕು, ಮೊಳಕಾಲ್ಮುರು, ಜಗಳೂರು, ಕೊಟ್ಟೂರು, ಕೂಡ್ಲಿಗಿ, ದಾವಣಗೆರೆ  ಹಾಗೂ  ಆಂಧ್ರ ಪ್ರದೇಶದಿಂದಲೂ ಭಕ್ತರು ಪಾಲ್ಗೊಳ್ಳುತ್ತಾರೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಎತ್ತಿನಹಟ್ಟಿ ಪಟೇಲ್‌ ಜಿ.ಎಂ.ತಿಪ್ಪೇಸ್ವಾಮಿ ಹೇಳುತ್ತಾರೆ.

ವಿ.ಧನಂಜಯ ನಾಯಕನಹಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT