ಮೈಸೂರು: ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಅಮಿತ್ ಶಾ ಅವರು ಅಂಬಾವಿಲಾಸ ಅರಮನೆಗೆ ಶುಕ್ರವಾರ ಭೇಟಿ ನೀಡಿ ರಾಜವಂಶಸ್ಥರ ಜೊತೆ ಮಾತುಕತೆ ನಡೆಸಿದರು.
ಚುನಾವಣಾ ಪ್ರಚಾರಕ್ಕೆ ಮೈಸೂರಿಗೆ ಗುರುವಾರ ಮಧ್ಯರಾತ್ರಿ ಆಗಮಿಸಿದ ಅವರು ಬೆಳಿಗ್ಗೆ 10.40ಕ್ಕೆ ಅರಮನೆಗೆ ಬಂದರು. ಮೈಸೂರು ಪೇಟ ತೊಡಿಸಿ, ಕಮಲದ ಹೂ ನೀಡಿ ಅರಮನೆ ಸಿಬ್ಬಂದಿ ಸ್ವಾಗತ ಕೋರಿದರು.
ಅರಮನೆಯ ಖಾಸಗಿ ನಿವಾಸದಲ್ಲಿ ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್ ಹಾಗೂ ಯದುವೀರ್ ಒಡೆಯರ್ ಜೊತೆ ಮಾತುಕತೆ ನಡೆಸಿದರು.
ಕೇಂದ್ರ ಸಚಿವ ಅನಂತಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕ ಸಿ.ಟಿ.ರವಿ ಸೇರಿದಂತೆ ಪ್ರಮುಖರು ಇದ್ದರು.
ಮಾತುಕತೆ ವೇಳೆ ಮಾಧ್ಯಮಗಳನ್ನ ಹೊರಗಿಟ್ಟು ಸಭೆ ನಡೆಸಲಾಯಿತು.
ಅರಮನೆಗೆ ಭೇಟಿ ನೀಡುವ ಮುನ್ನ ಅಮಿತ್ ಶಾ ಸುತ್ತೂರು ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು