ಚನ್ನರಾಯಪಟ್ಟಣ: ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಕಡೆ ದರೋಡೆ ಮಾಡಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಸೈಯದ್ ಶಬ್ಬೀರ್, ಕೋರಮಂಗಲದ ತೇಜಸ್ ಯಾದವ್, ಗೋಪಾಲ ಬಂಧಿತ ಆರೋಪಿಗಳು.
ಮೂವರನ್ನು ಬೆಂಗಳೂರಿನಲ್ಲಿ ಗುರುವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದಿಬ್ಬರು ಆರೋಪಿಗಳಾದ ಶಿವಮೊಗ್ಗದ ಶಾನ್ ನವಾಜ್, ಬೆಂಗಳೂರಿನ ಮಹಮದ್ ಆಶಂ ಕೃತ್ಯದಲ್ಲಿ ಭಾಗಿಯಾಗಿದ್ದು, ಸದ್ಯದಲ್ಲಿ ಅವರನ್ನು ಬಂಧಿಸಲಾಗುವುದು ಎಂದು ಎಎಸ್ಪಿ ನಂದಿನಿ ತಿಳಿಸಿದರು.
ಕೃತ್ಯಕ್ಕೆ ಬಳಸಿದ ಕಾರು, ಬೈಕಿನ ಕೀಲಿ, ₹ 2,300 ನಗದು ಸೇರಿ ₹ 8.17 ಲಕ್ಷ ಮೌಲ್ಯದ ವಸ್ತುವನ್ನು ವಶಕ್ಕೆ ಪಡೆಯಲಾಗಿದೆ.
ಜ. 7ರಂದು ಮುಂಜಾನೆ ಪಟ್ಟಣದ ಯೋಗೀಶ್ ಪೆಟ್ರೋಲ್ ಬಂಕ್ಗೆ ನೋಂದಣಿ ಸಂಖ್ಯೆ ಇಲ್ಲದ ಕಾರಿನಲ್ಲಿ ಬಂದ ಐವರು ಆರೋಪಿಗಳು, ಕಾರಿಗೆ ಡೀಸೆಲ್ ತುಂಬಿಸಿಕೊಂಡಿದ್ದಾರೆ. ಬಂಕ್ ಕೆಲಸಗಾರ ಸಂದೀಪ್ ಬಳಿ ಇದ್ದ 3 ಸಾವಿರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಡೀಸೆಲ್ ಹಣವನ್ನು ಕೊಡದೆ ಕಾರಿನಲ್ಲಿ ಪರಾರಿಯಾಗಿದ್ದಾರೆ.
ಅದೇ ದಿನ ಹಿರೀಸಾವೆ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಧಾಕರ್ ಎಂಬುವವರ ಬೈಕ್ ಅನ್ನು ಅಡ್ಡಗಟ್ಟಿ ಲಾಂಗ್ನಿಂದ ಹಲ್ಲೆ ಮಾಡಿ ಅವರ ಬಳಿ ಇದ್ದ ಒಂದು ಮೊಬೈಲ್, ಬೈಕ್ ಕೀಲಿಯನ್ನು ಕಿತ್ತುಕೊಂಡಿದ್ದರು ಎಂದು ತಿಳಿಸಿದರು.
ಸೈಯದ್ ಶಬ್ಬೀರ್, ತೇಜಸ್ ಯಾದವ್, ಶಾನ್ ನವಾಜ್ ಬೆಂಗಳೂರಿನ ಹಲವು ಕಡೆ ಕಳ್ಳತನ ಮತ್ತು ಗಲಾಟೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.
ಆರೋಪಿಗಳನ್ನು ಪತ್ತೆ ಹಚ್ಚಲು ಶ್ರಮಿಸಿದ ಸಿಪಿಐ ಬಿ.ಜಿ.ಕುಮಾರ್, ಪಿಎಸ್ಐಗಳಾದ ಎಲ್.ಎನ್. ಕಿರಣ್ ಕುಮಾರ್, ಎನ್.ಎಂ. ಭವಿತಾ ಸಿಬ್ಬಂದಿ ಕುಮಾರಸ್ವಾಮಿ, ಸುರೇಶ್, ಜವರೇಗೌಡ, ಮಹೇಶ್, ಜಯಪ್ರಕಾಶ್, ರವೀಶ್, ಬೀರಲಿಂಗ, ನಾಗೇಂದ್ರ, ಅರುಣ, ಪುಟ್ಟರಾಜು, ಪರಮೇಶ್, ಮಧು ಅವರ ಕಾರ್ಯವನ್ನು ಎಎಸ್ಪಿ ಶ್ಲಾಘಿಸಿದರು.