ಬೆಂಗಳೂರು: ಅರಣ್ಯ ಪ್ರದೇಶ ಒತ್ತುವರಿ ತೆರವು ಕುರಿತು ನಾಲ್ಕು ವಾರಗಳ ಒಳಗಾಗಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಎಲ್ಲ ರಾಜ್ಯಗಳಿಗೂ ಸೂಚಿಸಿದೆ.
ಅರಣ್ಯ ಒತ್ತುವರಿ ಕಾನೂನುಬಾಹಿರ ಎಂಬ ಆದೇಶದ ನಂತರವೂ ಅಕ್ರಮ ಒತ್ತುವರಿಗೆ ಕಡಿವಾಣ ಬಿದ್ದಿಲ್ಲ ಎಂದು ಆರೋಪಿಸಿ ವೈಲ್ಡ್ಲೈಫ್ ಫಸ್ಟ್ ಹಾಗೂ ಇತರ ಸ್ವಯಂ ಸೇವಾ ಸಂಸ್ಥೆಗಳು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು.
ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಒತ್ತುವರಿದಾರರ ವಿರುದ್ಧ ಯಾವ ಕ್ರಮ ಜರುಗಿಸಲಾಗಿದೆ ಎಂಬ ಮಾಹಿತಿ ನೀಡುವಂತೆ ಸೂಚಿಸಿದೆ.
ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿಯೇ ಒತ್ತುವರಿ ನಡೆದಿದೆ ಎಂಬ ಒತ್ತುವರಿದಾರರ ವಾದವನ್ನು ಒಪ್ಪದ ಪೀಠ, ಇಲ್ಲಿಯವರೆಗೆ ಎಷ್ಟು ಒತ್ತುವರಿ ಅರಣ್ಯ ಭೂಮಿಯನ್ನು ಮರಳಿ ವಶಕ್ಕೆ ಪಡೆಯಲಾಗಿದೆ ಎಂದು ಕೇಳಿದೆ.
ಬೆಂಗಳೂರು ಮೂಲದ ವೈಲ್ಡ್ಲೈಫ್ ಫಸ್ಟ್ ಸಂಸ್ಥೆಯು ವನ್ಯಜೀವಿ, ಅರಣ್ಯ ಸಂರಕ್ಷಣೆ ಹೋರಾಟದಲ್ಲಿ ತೊಡಗಿಸಿಕೊಂಡಿದೆ. ಅಮರಾವತಿಯ ನೇಚರ್ ಕನ್ಸರ್ವೇಶನ್ ಫೌಂಡೇಶನ್ ಮತ್ತು ನಾಗಪುರದ ಟ್ರಾಕ್ಟ್ ಸಂಸ್ಥೆಗಳು ವೈಲ್ಡ್ಲೈಫ್ ಫಸ್ಟ್ ಜತೆ ಕಾನೂನು ಹೋರಾಟದಲ್ಲಿ ಕೈಜೋಡಿಸಿವೆ.
2005ರ ಡಿಸೆಂಬರ್ ನಂತರ ಅರಣ್ಯ ಭೂಮಿಯನ್ನು ಹೇಗೆ ಅಕ್ರಮವಾಗಿ ಒತ್ತುವರಿ ಮಾಡಲಾಗಿದೆ ಎಂಬುವುದನ್ನು ಪುಷ್ಟೀಕರಿಸಲು ಉಪಗ್ರಹ ಚಿತ್ರ ಮತ್ತು ಇತರ ದಾಖಲೆ, ಪುರಾವೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಸಂಸ್ಥೆಯ ಟ್ರಸ್ಟಿ ಪ್ರವೀಣ್ ಭಾರ್ಗವ್ ತಿಳಿಸಿದ್ದಾರೆ.
ಬುಡಕಟ್ಟು ಜನಾಂಗ, ಸಾಂಪ್ರದಾಯಿಕ ಅರಣ್ಯ ವಾಸಿಗಳನ್ನು ಬಿಟ್ಟು ಇತರರು ಅಕ್ರಮವಾಗಿ ವನ್ಯಜೀವಿಧಾಮ, ಸಂರಕ್ಷಿತ ತಾಣಗಳ ಪ್ರದೇಶಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮುಖ್ಯಾಂಶಗಳು
* ದೇಶದಲ್ಲಿ ಒಟ್ಟು 44 ಲಕ್ಷ ಅರಣ್ಯ ಒತ್ತುವರಿದಾರರ ಅರ್ಜಿಗಳ ಪೈಕಿ 20 ಲಕ್ಷ ಅರ್ಜಿ ವಜಾ
* 50 ಲಕ್ಷ ಹೆಕ್ಟೇರ್ ಒತ್ತುವರಿ ಅರಣ್ಯ ಭೂಮಿಯ ಪೈಕಿ ಹತ್ತು ವರ್ಷಗಳಲ್ಲಿ ಒಂದೇ ಒಂದು ಹೆಕ್ಟೇರ್ ಭೂಮಿಯನ್ನು ಮರಳಿ ವಶಕ್ಕೆ ಪಡೆದಿಲ್ಲ