ಮಂಗಳೂರು: ಕರಾವಳಿಯಲ್ಲಿ ಹಿಂಸೆಯ ರಾಜಕಾರಣ ಮಾಡುತ್ತಿರುವ ಬಿಜೆಪಿಗೆ ಜನಸುರಕ್ಷಾ ಯಾತ್ರೆ ನಡೆಸುವ ನೈತಿಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ವಾಗ್ದಾಳಿ ನಡೆಸಿದರು.
ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಲ್ಲೆಯಲ್ಲಿ ನಡೆಯುತ್ತಿರುವ ನಿಯೋಜಿತ ಹತ್ಯೆಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನೇರವಾದ ಪಾತ್ರವಿದೆ. ಈಗ ಜನರನ್ನು ದಿಕ್ಕು ತಪ್ಪಿಸಲು ಯಾತ್ರೆ ಮಾಡುತ್ತಿದ್ದಾರೆ' ಎಂದರು.
ಬಂಟ್ವಾಳ ತಾಲ್ಲೂಕಿನಲ್ಲಿ ನಾಲ್ಕು ವರ್ಷಗಳಲ್ಲಿ ಮತೀಯ ದ್ವೇಷದಲ್ಲಿ ಐದು ಹತ್ಯೆಗಳು ಆಗಿವೆ. ಅದರಲ್ಲಿ ನಾಲ್ಕು ಹತ್ಯೆಗಳಲ್ಲಿ ಬಿಜೆಪಿ, ಸಂಘ ಪರಿವಾರದ ಪಾತ್ರವಿದೆ ಎಂದು ಹೇಳಿದರು.
ಚುನಾವಣೆಯಲ್ಲಿ ಲಾಭ ಪಡೆಯಲು ಬಿಜೆಪಿ ಯಾತ್ರೆ ಮಾಡುತ್ತಿದೆ. ಅವರ ಉದ್ದೇಶ ಶಾಂತಿ ಸ್ಥಾಪನೆ ಅಲ್ಲ. ಗಲಭೆ ಸೃಷ್ಟಿಸುವುದು ಎಂದರು.