ಹಾಸನ: ದಲಿತ, ರೈತ ಸಂಘಟನೆ, ಸಾಕ್ಷರತಾ ಆಂದೋಲನ ಮತ್ತು ಪ್ರಗತಿಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ರೈತ ನಾಯಕ ಕೊಟ್ಟೂರು ಶ್ರೀನಿವಾಸ್ ಇನ್ನೂ ನೆನಪು ಮಾತ್ರ.
ಕಿಡ್ನಿ ವೈಫಲ್ಯದ ಕಾರಣ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 15 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಡಯಾಲಿಸಿಸ್ ವೇಳೆ ಹೃದಯಾಘಾತವಾಗಿತ್ತು.
ಪಾರ್ಥಿವ ಶರೀರ ಮಂಗಳವಾರ ರಾತ್ರಿ ಹಾಸನ ತಲುಪಿತು. ಅವರ ನಿವಾಸದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಮೂಲತಃ ಬಳ್ಳಾರಿ ಜಿಲ್ಲೆಯ ಕೊಟ್ಟೂರಿನವರಾದ ಕೊಟ್ಟೂರು ಶ್ರೀನಿವಾಸ್ ಮೂರು ದಶಕಗಳಿಂದ ಹಾಸನದಲ್ಲಿಯೇ ನೆಲೆಯೂರಿದ್ದರು. ರೈತ ನಾಯಕ ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರಿಂದ ಸ್ಪೂರ್ತಿ ಪಡೆದು ರೈತ ಚಳವಳಿಗೆ ಧುಮುಕಿದ್ದರು. ಹಲವು ಹೋರಾಟಗಳ ನೇತೃತ್ವ ವಹಿಸಿದ್ದರು.
ಜಿಲ್ಲೆಯಲ್ಲಿ ನಡೆದ ನೀರಾ ಚಳವಳಿ, ಆನ್ಲೈನ್ ಲಾಟರಿ, ಪಂಪ್ಸೆಟ್ಗೆ ಮೀಟರ್ ಅಳವಡಿಕೆ ವಿರುದ್ಧದ ಹೋರಾಟಗಳಲ್ಲಿ ಪಾಲ್ಗೊಂಡು ಜೈಲುವಾಸ ಅನುಭವಿಸಿದ್ದರು. ಸಾಕ್ಷರತಾ ಆಂದೋಲನ, ರಂಗಭೂಮಿ, ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರು.
ಶಿವಮೊಗ್ಗದಲ್ಲಿ ನೆಲೆಸಿದ್ದಾಗ ಸಿಐಟಿಯು ನೇತೃತ್ವದ ಗ್ರಾಮ ಪಂಚಾಯಿತಿ ನೌಕರರ ಮುಖಂಡರಾಗಿಯೂ ಕೆಲಸ ಮಾಡಿದ್ದಾರೆ.
ಪೂರ್ಣಚಂದ್ರ ತೇಜಸ್ವಿ ಅವ ರೊಂದಿಗಿನ ಒಡನಾಟ, ಹೋರಾಟದ ಹಾಡುಗಳು, ಶೋಷಿತರ ಪರವಾದ ಧ್ವನಿ, ಪುಸ್ತಕ ಮಾರಾಟಗಾರರಾಗಿ ಹೆಚ್ಚು ಪರಿಚಿತರಾದವರು.
ಕೊಟ್ಟೂರು ಶ್ರೀನಿವಾಸ್ ನಿಧನಕ್ಕೆ ಕರ್ನಾಟಕ ಪ್ರಾಂತ ರೈತ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದೆ.
‘ಸಾಕ್ಷರತಾ ಆಂದೋಲನ, ರಂಗಭೂಮಿ, ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿ ಕೊಂಡಿದ್ದರು’ ಎಂದು ಕೆಪಿಆರ್ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಆರ್.ನವೀನ್ಕುಮಾರ್, ಕಾರ್ಯದರ್ಶಿ ವಸಂತ್ ಕುಮಾರ್ ತಿಳಿಸಿದ್ದಾರೆ.
‘ನೊಂದವರಿಗೆ ನ್ಯಾಯ ಕೊಡಿಸಲು ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಎ.ಜಿ.ಹರಿಗೋಪಾಲ್ ತಿಳಿಸಿದ್ದಾರೆ.