ಆಲೂರು: ಕೊರೊನ ಸಾಂಕ್ರಮಿಕ ರೋಗ ಹರಡುವಿಕೆಯನ್ನು ತಡೆಗಟ್ಟಲು ಲಾಕ್ಡೌನ್ ಆಗಿರುವ ಹಿನ್ನೆಲೆಯಲ್ಲಿ ಅಧಿಸೂಚಿತ ಕೊಳೆಗೇರಿಗಳಲ್ಲಿರುವವರು, ಕಟ್ಟಡ ಕಾರ್ಮಿಕರ ವಸತಿ ತಾಣಗಳು, ತಾತ್ಕಾಲಿಕ ಪುನರ್ವಸತಿ ಶಿಬಿರಗಳಲ್ಲಿರುವ ನಿವಾಸಿಗಳಿಗೆ ತಾಲ್ಲೂಕು ಆಡಳಿತ, ಪಟ್ಟಣ ಪಂಚಾಯಿತಿ ವತಿಯಿಂದ ನಂದಿನಿ ಹಾಲನ್ನು ಉಚಿತವಾಗಿ ವಿತರಿಸಲಾಯಿತು.
ಹಾಸನ ಕೆ.ಎಂ.ಎಫ್. ಘಟಕ ಸರಬರಾಜು ಮಾಡಿದ್ದ ಸುಮಾರು 900 ಲೀ. ಹಾಲನ್ನು ಹಲವು ವಾರ್ಡುಗಳಲ್ಲಿರುವ ಕೆಲ ಕುಟುಂಬಕ್ಕೆ ತಲಾ ಒಂದು ಲೀ. ನಂತೆ ವಿತರಿಸಲಾಯಿತು.
ತಹಸೀಲ್ದಾರ್ ಶೀರಿನ್ತಾಜ್ ಅವರು ಮಾತನಾಡಿ, ಕೊರೊನ ಎಫೆಕ್ಟ್ನಿಂದ ದೇಶ ಲಾಕ್ಡೌನ್ ಆಗಿದೆ. ಹಾಸನ ಕೆಎಂಎಫ್ ನಿಂದ ನೀಡುವ ಹಾಲನ್ನು ಪ್ರತಿದಿನ ಬೆಳಗ್ಗೆ 6 ರಿಂದ 7 ರವರೆಗೆ ನೀಡಲಾಗುವುದು ಎಂದರು.
ಎಪಿಎಂಸಿ ಅಧ್ಯಕ್ಷ ಕೆ. ಎಸ್. ಮಂಜೇಗೌಡ ಮಾತನಾಡಿ, ಜಿಲ್ಲೆಯಲ್ಲಿ ರೈತರು ಬೆಳೆದ ಬೆಳೆಗೆ ಕೊಳ್ಳುವವರಿಲ್ಲದೆ ಸೂಕ್ತ ಬೆಲೆ ಸಿಗದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರಕಾರ ರೈತರ ನೆರವಿಗೆ ಧಾವಿಸಬೇಕು. ಸಾಮಾಜಿಕ ಅಂತರ ಹಾಗೂ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಮರೆಯಬಾರದು ಎಂದರು.
ಪಟ್ಟಣ ಪಂಚಾಯಿತಿ ಮುಖ್ಯಾಧಕಾರಿ ಕೃಷ್ಣಮೂರ್ತಿಯವರು ಮಾತನಾಡಿ, ಎಲ್ಲ ವಾರ್ಡುಗಳಿಗೆ ತಪ್ಪದೆ ಕ್ರಿಮಿನಾಶಕ ಸಿಂಪಡಿಸಲಾಗುವುದು ಎಂದರು. ಪಟ್ಟಣ ಪಂದಾಯಿತಿ ಸದಸ್ಯ ಅಬ್ದುಲ್ ಖುದ್ದುಸ್, ಹರೀಶ್, ಆರೋಗ್ಯ ನಿರೀಕ್ಷಕ ಮಂಜುನಾಥ್, ವೆಂಕಟೇಗೌಡ, ಉಮೇಶ್ ಹಾಜರಿದ್ದರು.;