ಹಾಸನ: ಗ್ರಾಹಕರಿಗೆ ಬ್ಯಾಂಕ್ ವ್ಯವಹಾರಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ಸಾಲ, ಸೌಲಭ್ಯ ಒದಗಿಸಬೇಕು ಎಂದು ಶಾಸಕ ಪ್ರೀತಂ ಜೆ. ಗೌಡ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜ್ಞಾನಾಕ್ಷಿ ಕನ್ವೆನ್ಷನ್ ಸೆಂಟರ್ನಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಬ್ಯಾಂಕ್ಗಳ ಸಮಿತಿ, ಜಿಲ್ಲಾ ಸದಸ್ಯ ಬ್ಯಾಂಕ್ಗಳ ವತಿಯಿಂದ ಸಾಲ ಸಂಪರ್ಕ ಕಾರ್ಯಕ್ರಮ ಉದ್ಘಾಟಿಸಿದ ಅವರು, ‘ಪ್ರಾಮಾಣಿಕವಾಗಿಸಾಲ ಸೌಲಭ್ಯ ಅವಶ್ಯಕತೆ ಇರುವವರಿಗೆ ಸಹಾಯ ಮಾಡಿದರೆ ಗ್ರಾಹಕರು ಉತ್ತಮ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುತ್ತದೆ’ ಎಂದರು.
ಗ್ರಾಹಕರು ಬ್ಯಾಂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಸರಿಯಾದ ಪ್ರತಿಕ್ರಿಯೆ ನೀಡಿ ಮಾಹಿತಿ ಒದಗಿಸಬೇಕು. ಪ್ರತಿ ಬ್ಯಾಂಕ್ ಕನಿಷ್ಠ 5 ಉದ್ಯಮಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರ ಮೂಲಕ ಇತರೆ ಉದ್ಯಮಿಗಳು ಸ್ಫೂರ್ತಿ ಪಡೆಯುವ ಕೆಲಸ ಆಗಬೇಕು ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾಧಿಕಾರಿ ಆರ್. ಗಿರೀಶ್ ಮಾತನಾಡಿ, ‘ದೇಶದ ಒಟ್ಟಾರೆ ಉತ್ಪನ್ನದಲ್ಲಿ ಶೇ 20ರಷ್ಟು ಕೃಷಿಗೆ, ಶೇ30ರಷ್ಟು ಕೈಗಾರಿಕೆ, ಇನ್ನುಳಿದ ಶೇ 60ರಷ್ಟು ಇತರೆ ಭಾಗದಿಂದ ದೊರೆಯುತ್ತಿದ್ದು, ಆಧುನಿಕ ಯುಗದಲ್ಲಿ ಉದ್ದಿಮೆಗಳಲ್ಲಿ ಹೊಸ ಆವಿಷ್ಕಾರ ಮಾಡುವುದರ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ’ಎಂದರು.
ಕೆಲ ಸಂದರ್ಭದಲ್ಲಿ ಬ್ಯಾಂಕ್ ದಿವಾಳಿಯಾಗುವ ಪರಿಸ್ಥಿತಿ ಎದುರಾ ಗಿದ್ದು, ಗ್ರಾಹಕರು ಸರಿಯಾದ ಸಮಯಕ್ಕೆಸಾಲ ಮರುಪಾವತಿ ಮಾಡುವಂತೆ ಅವರು ಹೇಳಿದರು.
ಜಿಉ.ಪಂ ಸಿಇಒ ಬಿ.ಎ ಪರಮೇಶ್ ಮಾತನಾಡಿ, ‘ಸರ್ಕಾರದಿಂದ ₹ 10 ಸಾವಿರ ಕೋಟಿಯನ್ನು ಬೇರೆ ಯೋಜನೆಗಳಿಗೆ ಬಿಡುಗಡೆ ಮಾಡಿದ್ದು, ಕೃಷಿಗೆ ₹ 6 ಸಾವಿರ ಕೋಟಿ, ತೋಟಗಾರಿಕೆಗೆ ₹ 1,400 ಕೋಟಿ ಹಾಗೂ ಇತರೆ ₹ 1,000 ಕೋಟಿ ಕಾಯ್ದಿರಿಸಲಾಗಿದ್ದು, ಇದರ ಸದುಪಯೋಗ ಪಡೆಯಿರಿ’ ಎಂದು ತಿಳಿಸಿದರು.
ಎಲ್ಲಾ ಬ್ಯಾಂಕಿನ ಮುಂಭಾಗದಲ್ಲಿ ಸಾರ್ವಜನಿಕರಿಗೆ ದೊರೆಯಬಹುದಾದ ಸಾಲ, ಸೌಲಭ್ಯ, ಯೋಜನೆಗಳ ಬಗ್ಗೆ ಮಾಹಿತಿ ಪ್ರದರ್ಶಿಸುವಂತೆ ತಿಳಿಸಿದರು.
ಕೆನರಾ ಬ್ಯಾಂಕ್ನ ಜನರಲ್ ಮ್ಯಾನೇಜರ್ ಯೋಗೇಶ್ ಬಿ. ಆಚಾರ್ಯ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಅರ್ಹ ಫಲಾನುಭವಿಗಳಿಗೆ ಸಾಲಪತ್ರ ವಿತರಣೆ ಮಾಡಲಾಯಿತು.
ಎಚ್.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಸೋಮನಹಳ್ಳಿ ನಾಗರಾಜು, ನಬಾರ್ಡ್ ವ್ಯವಸ್ಥಾಪಕಿಮಾಲಿನಿ ಸುವರ್ಣ, ಲೀಡ್ ಬ್ಯಾಂಕ್ ಮ್ಯಾನೇಜರ್ ರೇವತಿ ಸುಧಾಕರ್, ಸಹಾಯಕ ಮಹಾಪ್ರಬಂಧಕ ಸುನಿಲ್ ಕುಮಾರ್, ಡಿ.ಸಿ.ಸಿ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಕುಮಾರ್, ಎಸ್.ಬಿ.ಎಂ ಮ್ಯಾನೇಜರ್ ಶ್ರೀಪತಿ ಕಾರ್ಯಕ್ರಮದಲ್ಲಿ ಹಾಜರಿದ್ದರು.