ಹಾಸನ: ನಗರ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಶನಿವಾರ ಭಾರತ ಸೇವಾದಳದ ಸ್ಥಾಪಕ ಎನ್.ಎಸ್.ಹರ್ಡೀಕರ್ ಅವರ 133ನೇ ಜಯಂತಿಯನ್ನು ಶನಿವಾರ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ರಾಜ್ಯ ಸೇವಾದಳ ಉಪಾಧ್ಯಕ್ಷ ಗೋಪಾಲೇಗೌಡ ಮರ್ಕುಲಿ, ‘ದೇಶದಲ್ಲಿ ಶಿಸ್ತು, ರಾಜಕೀಯ ವ್ಯವಸ್ಥೆಗೆ ಹರ್ಡೀಕರ್ ಅವರು ಸ್ಥಾಪಿಸಿದ ಸೇವಾದಳ ಬುನಾದಿಯಾಗಿದೆ. ಕನ್ನಡಿಗರಲ್ಲಿ ರಾಷ್ಟ್ರೀಯ ಪ್ರಜ್ಞೆ ಮೂಡಿಸುವಲ್ಲಿ ಡಾ.ನಾರಾಯಣ ರಾವ್ ಸುಬ್ಬರಾವ್ ಹರ್ಡೀಕರ್ ಅವರ ಪರಿಶ್ರಮ ನಿರ್ಲಕ್ಷಿಸುವಂತಿಲ್ಲ. ವೈದ್ಯಕೀಯ ಕ್ಷೇತ್ರದಲ್ಲಿದ್ದರೂ ರಾಷ್ಟ್ರ ನಿರ್ಮಾಣದ ಗುರಿ ಹೊಂದಿದ್ದರು’ ಎಂದರು.
‘ಜನಸಮುದಾಯದಲ್ಲಿ ಸ್ವದೇಶಿ ಭಾವನೆ ಬೆಳೆಸಲು ಉಪನ್ಯಾಸ ನೀಡುವುದು, ಪುಸ್ತಕ ಮಾರುವುದು ಅವರ ಕೆಲಸವಾಗಿತ್ತು. ಅವರಿಗೆ ಲಾಲಾ ಲಜಪತ್ರಾಯ್ ಅವರ ಬೆಂಬಲವಿತ್ತು’ ಎಂದು ನುಡಿದರು.
‘ಸ್ವಾತಂತ್ರ್ಯ ಹೋರಾಟದ ಕಾರಣಕ್ಕಾಗಿ ಸೆರೆಮನೆ ವಾಸ ಅನುಭವಿಸಿದ್ದ ಹರ್ಡೀಕರ್ ಜೈಲಿನಿಂದ ಬಂದ ಮೇಲೆ ಮಹಿಳೆ, ಪುರುಷರಿಗೆ ತರಬೇತಿ ನೀಡಲು ಮುಂದಾಗಿದ್ದರು’ ಎಂದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಎಚ್.ಕೆ.ಜವರೇಗೌಡ, ಬಾಗೂರು ಮಂಜೇಗೌಡ, ಎನ್.ಬಿ.ದಿನೇಶ್, ರಾಜ್ಯ ಸೇವಾದಳದ ಸದಸ್ಯರಾದ ರಂಗೇಗೌಡ, ಶಿವಕುಮಾರ್ ಹಾಜರಿದ್ದರು.