ಹಾಸನ: ಹಾಸನಾಂಬ ದೇವಿ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಜಾತ್ರಾ ಮಹೋತ್ಸವಕ್ಕೆ ಎರಡು ದಿನ ಮಂಚಿತವಾಗಿ ಖಜಾನೆಯಿಂದ ದೇವಸ್ಥಾನಕ್ಕೆ ಒಯ್ದು ಮಡಿ ಮಾಡುವುದು ಸಂಪ್ರದಾಯ.
ಅದರಂತೆ ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್, ತಹಶೀಲ್ದಾರ್ ಶಿವಶಂಕರಪ್ಪ ಹಾಗೂ ಅರ್ಚಕರ ಸಮ್ಮುಖದಲ್ಲಿ ಖಜಾನೆಯಿಂದ ದೇವಿಯ ಆಭರಣಗಳನ್ನು ಹೊರ ತೆಗೆದು ಅಡ್ಡಪಲ್ಲಕಿಯಲ್ಲಿಟ್ಟು ಪೂಜೆ ಸಲ್ಲಿಸಿದರು.
ನಂತರ ಮಂಗಳ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.
ಆಭರಣಗಳನ್ನು ದೇವಾಲಯದ ಬಾಗಿಲು ತೆರೆಯುವ ವರೆಗೂ ಅರ್ಚಕರ ಮನೆಯಲ್ಲಿ ಇರಿಸಲಾಗುತ್ತದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದ್ದು, ನಗರದ ಎಲ್ಲಾ ಪ್ರಮುಖ ಬೀದಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ರಸ್ತೆಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ನ. 1ರ ಮಧ್ಯಾಹ್ನ 12.30ಕ್ಕೆ ದೇವಾಲಯದ ಬಾಗಿಲು ತೆರೆಯಲಿದ್ದು, ನ. 2ರಿಂದ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿದೆ.