ಹಾಸನ: ಹಾಸನದಲ್ಲಿ ಅಂತರರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣ ನಿರ್ಮಿಸಬೇಕೆಂಬ ಸಂಸದ ಪ್ರಜ್ವಲ್ ರೇವಣ್ಣ ಹೇಳಿಕೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿ, ಹಾಸನ ಈಗಲೂ ವಿಶ್ವ ಭೂಪಟದಲ್ಲಿದೆ. ಹೊಯ್ಸಳರ ನಾಡು ಬೇಲೂರು-ಹಳೇಬೀಡು ಮತ್ತು ಶ್ರವಣಬೆಳಗೊಳದ ಗೊಮ್ಮಟೇಶ್ವರ, ಅದೇ ರೀತಿ ಎಚ್.ಡಿ. ದೇವೇಗೌಡರು ಪ್ರಧಾನಿ ಆಗುವುದರ ಮೂಲಕ ಹಾಸನ ಪ್ರತಿಷ್ಠಿತ ಜಿಲ್ಲೆಯಾಗಿ ಗುರುತಿಸಲ್ಪಟ್ಟಿದ್ದೆ ಎಂದು ತಿರುಗೇಟು ನೀಡಿದರು.
ಕಳೆದ 25 ವರ್ಷದಿಂದ ದೇವೇಗೌಡರು ಸಂಸದರಾಗಿದ್ದರು. ಈಗ ಪ್ರಜ್ವಲ್ ರೇವಣ್ಣ ಸಂಸದರಾಗಿದ್ದಾರೆ. ಅವರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುತ್ತಾರೋ ಅಥವಾ ವಿಭಿನ್ನವಾಗಿ ಬೇರೆ ಉನ್ನತ ಮಟ್ಟದ ಏರ್ ಪೋರ್ಟ್ ಮಾಡುತ್ತಾರೋ ಗೊತ್ತಿಲ್ಲ. ಕೇಂದ್ರದ ಗಮನ ಸೆಳೆದು ಜಿಲ್ಲೆಯ ಅಭಿವೃದ್ಧಿಗೆ ಖಂಡಿತ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
‘ನನಗಿಂತ ಸಂಸದರು 8 ವರ್ಷ ಚಿಕ್ಕವರು. ಅವರ ಮನಸ್ಥಿತಿಯಲ್ಲಿ ವಿಶ್ವ ಭೂಪಟಕ್ಕೆ ಹಾಸನ ಜಿಲ್ಲೆ ಸೇರಬೇಕು. ನಗರದಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ವಿಮಾನ ನಿಲ್ದಾಣ ಬೇಡವೆಂದರೆ ಅದಕ್ಕೆ ವಿರೋಧ ಮಾಡುವುದಿಲ್ಲ. ಯುವಕರು ಇದ್ದಾರೆ ಅವರ ಯೋಚನೆ ಸರಿಯಾಗಿರಬಹುದು’ ಎಂದರು.