ಹಾಸನ: ಅಧಿದೇವತೆ ಹಾಸನಾಂಬೆ ದೇವಾಲಯದ ಹುಂಡಿ ಹಣವನ್ನು ಮಂಗಳವಾರ ಎಣಿಕೆ ಮಾಡಲಾಗಿದ್ದು, ಒಟ್ಟು ₹22,77,772 ಹಣ ಸಂಗ್ರಹವಾಗಿದೆ.
ದೇವಾಲಯದ ಆಡಳಿತಾಧಿಕಾರಿ ಬಿ.ಎ.ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಸಮ್ಮುಖದಲ್ಲಿ ಸಿಸಿಟಿವಿ ಕ್ಯಾಮೆರಾ ಕಣ್ಗಾವಲಿನಲ್ಲಿ ಸುಮಾರು 10 ಹುಂಡಿಗಳ ಎಣಿಕೆ ಕಾರ್ಯ ನಡೆಯಿತು.
ಹಾಸನಾಂಬೆ ದೇವಾಲಯದ ಒಟ್ಟು 9 ಹುಂಡಿಗಳಿಂದ ₹21,34,052 ಸಂಗ್ರಹವಾಗಿದ್ದರೆ, ಸಿದ್ದೇಶ್ವರ ದೇವಾಲಯದ ಒಂದು ಹುಂಡಿಯಿಂದ ₹1,45,720 ಕಾಣಿಕೆ ರೂಪದಲ್ಲಿ ಸಂಗ್ರಹವಾಗಿದೆ. ಅಲ್ಲದೇ ಹುಂಡಿ ಎಣಿಕೆ ವೇಳೆ ಪ್ರೇಮ ಪತ್ರ, ಕೌಟುಂಬಿಕ ಸಮಸ್ಯೆ ನಿವಾರಿಸುವಂತೆ ಪ್ರಾರ್ಥನೆಯ ಪತ್ರದೊಂದಿಗೆ ವಿದೇಶಿ ಕರೆನ್ಸಿ, ನಾಣ್ಯಗಳು ಹಾಗೂ ಚಿನ್ನಾಭರಣ ಸಹ ದೊರೆತಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಆದಾಯ ಗಣನೀಯವಾಗಿ ಕಡಿಮೆಯಾಗಿದೆ. ಇದಕ್ಕೆ ಸಾರ್ವಜನಿಕ ದರ್ಶನ ನಿಷೇಧ ಮಾಡಿದ್ದು ಪ್ರಮುಖ ಕಾರಣವಾಗಿದೆ.
ಕಳೆದ ಬಾರಿ ಹಾಸನಾಂಬೆ ದೇವಾಲಯದ ಹುಂಡಿ ಕಾಣಿಕೆ, ₹1.31,24,424 ಕೋಟಿ ಇತ್ತು. ಸಿದ್ದೇಶ್ವರ ದೇವಾಲಯದಿಂದ ₹ 12,18,329 ಲಕ್ಷ ಬಂದಿತ್ತು. ನೇರ ಹಾಗೂ ವಿಶೇಷ ದರ್ಶನದ ₹ 300 ಹಾಗೂ ₹ 1000 ಬೆಲೆಯ ಟಿಕೆಟ್ ಹಾಗೂ ಲಾಡು ಮಾರಾಟದಿಂದ ₹ 1,75,16,587 ಸಂಗ್ರಹವಾಗಿತ್ತು.
ಬ್ಯಾಂಕ್ ಸಿಬ್ಬಂದಿ , ಕಂದಾಯ ಇಲಾಖೆ ಹಾಗೂ ಸ್ಕೌಟ್, ಗೈಡ್ಸ್ ಮಕ್ಕಳು, ದೇವಾಲಯದ ಆಡಳಿತಾಧಿಕಾರಿ, ತಹಶೀಲ್ದಾರ್ ಎಣಿಕೆ ಕಾರ್ಯದಲ್ಲಿ ತೊಡಗಿದ್ದರು. ಹುಂಡಿ ಹಣವನ್ನು ಬ್ಯಾಂಕ್ಗೆ ಜಮಾ ಮಾಡಲಾಯಿತು.