ಹಾಸನ: ಹಲವು ತಿಂಗಳ ಬಳಿಕ ನಗರ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಗುರುವಾರ ಸಂಜೆ ಸಾಧಾರಣ ಮಳೆಯಾಗಿದೆ.
ನಗರದಲ್ಲಿ ಗುಡುಗು ಸಹಿತ ಅರ್ಧ ತಾಸು ಮಳೆಯಾಯಿತು. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರ ಮೊಗದಲ್ಲಿ ಮಂದಹಾಸ ಮೂಡಿಸಿತು. ಆರಂಭದಲ್ಲಿ ತುಂತುರು ಹನಿ ಬೀಳಲಾರಂಭಿಸಿತು. ಸ್ವಲ್ಪ ಹೊತ್ತಿನ ಬಳಿಕ ಜೋರಾಯಿತು. ತಾಲ್ಲೂಕಿನ ಮೊಸಳೆ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಮಳೆಯಿಂದ ರಕ್ಷಣೆ ಪಡೆಯಲು ಕೆಲವರು ಕಟ್ಟಡ ಮತ್ತು ರಸ್ತೆ ಬದಿ ಮರಗಳ ಕೆಳಗೆ ಆಶ್ರಯ ಪಡೆದರು. ಕೆಲಸದ ನಿಮಿತ್ತ ಗ್ರಾಮಾಂತರ ಪ್ರದೇಶದಿಂದ ನಗರಕ್ಕೆ ಬಂದಿದ್ದವರು ತೊಯ್ದುಕೊಂಡು ಹೋದರು.