ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ಮಭೂಮಿ ಹಾಸನ ನೆಲದಲ್ಲೇ ಮಣ್ಣಾಗುವೆ

ಭಾವುಕರಾಗಿ ಮಾತನಾಡಿದ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ; ಸಕಲೇಶಪುರದಲ್ಲಿ ಪ್ರಚಾರ
Last Updated 2 ಮೇ 2019, 15:59 IST
ಅಕ್ಷರ ಗಾತ್ರ

ಸಕಲೇಶಪುರ: ‘ನನಗೆ ರಾಜಕೀಯ ಶಕ್ತಿ ತುಂಬಿರುವ ಹಾಸನದ ನೆಲದಲ್ಲಿಯೇ ಮಣ್ಣಾಗುತ್ತೇನೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಭಾವುಕರಾಗಿ ಹೇಳಿದರು.

ತಾಲ್ಲೂಕಿನ ಹಾನುಬಾಳು ಹೋಬಳಿ ಕೇಂದ್ರ ಹಾಗೂ ಪಟ್ಟಣದಲ್ಲಿ ನಡೆದ ಪ್ರಚಾರ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

‘ಹಾಸನ ನನ್ನ ಕರ್ಮಭೂಮಿ, ನೀವು ನನ್ನನ್ನು ಬೆಳೆಸಿ ರಾಜಕೀಯ ಶಕ್ತಿ ತುಂಬಿದ್ದೀರಿ. ಅನ್ಯತಾ ಭಾವಿಸಬೇಡಿ, ಅನಿವಾರ್ಯ ಕಾರಣಗಳಿಂದ ಕ್ಷೇತ್ರ ಬಿಟ್ಟು ಹೋಗಬೇಕಾಗಿದೆ. ಜಿಲ್ಲೆ ಹಾಗೂ ರಾಜ್ಯದ ಋಣ ಯಾವತ್ತೂ ಮರೆಯುವುದಿಲ್ಲ’ ಎಂದರು.

‘ನಾಲ್ಕು ದಶಕಗಳಿಗೂ ಹೆಚ್ಚು ಕಾಲ ರಾಜ್ಯ ಹಾಗೂ ರಾಷ್ಟ್ರದಲ್ಲಿ ಅಧಿಕಾರ ನಡೆಸಲು ಜಿಲ್ಲೆಯ ಜನರು ಹೇಗೆ ಶಕ್ತಿ ತುಂಬಿದ್ದೀರೋ ಅದೇ ಶಕ್ತಿಯನ್ನು ಪ್ರಜ್ವಲ್‌ಗೂ ನೀಡಿ. ಆತ ಹಲವು ವರ್ಷಗಳಿಂದಲೂ ಜನರ ಮಧ್ಯ ಬೆಳೆದು ಬಂದಿದ್ದಾನೆ. ಸಮಾಜ ಸೇವೆ ಮಾಡಬೇಕು ಎಂಬ ತುಡಿತ ಅವನಿಗೆ ಇದೆ. ಆ ಕಾರಣಕ್ಕಾಗಿಯೇ ಅವನು ಬೇಡ ಎಂದರೂ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದೇನೆ’ ಎಂದು ತಿಳಿಸಿದರು.

‘ಸಕಲೇಶಪುರ– ಆಲೂರು– ಕಟ್ಟಾಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪೂರ್ಣ ಸಹಕಾರ ನೀಡುತ್ತಿದ್ದು, ಈ ವಿಷಯದಲ್ಲಿ ಯಾರಿಗೂ ಗೊಂದಲ ಬೇಡ. ಕಾಂಗ್ರೆಸ್ ಅಧ್ಯಕ್ಷ ಭಾಸ್ಕರ್‌, ಮುಖಂಡರಾದ ಸಿದ್ದಯ್ಯ ಎಲ್ಲರೂ ನಮ್ಮೊಂದಿಗಿದ್ದಾರೆ. ಈ ಕ್ಷೇತ್ರಕ್ಕೆ ಯಾವತ್ತೂ ಅನ್ಯಾಯ ಮಾಡಿಲ್ಲ. ಎಲ್ಲಾ ವರ್ಗದವರಿಗೂ ರಾಜಕೀಯ ಶಕ್ತಿ ತುಂಬಿದ್ದೇವೆ. ಬಿ.ಎ. ಜಗನ್ನಾಥ್‌ ಅವರನ್ನು ಕಾಫಿ ಮಂಡಳಿ ಸದಸ್ಯರನ್ನಾಗಿ, ಮತ್ತೊಬ್ಬರನ್ನು ವಿಧಾನ ಪರಿಷತ್‌ ಸದಸ್ಯರನ್ನಾಗಿ, ಜಿ.ಪಂ. ಉಪಾಧ್ಯಕ್ಷರನ್ನಾಗಿ ಮಾಡಲಾಗಿದೆ’ ಎಂದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೊಲ್ಲಹಳ್ಳಿ ಸಲೀಂ, ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದಯ್ಯ, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ದೊಡ್ಡದೀಣೆಸ್ವಾಮಿ, ಯುವ ಜನತಾದಳ ಅಧ್ಯಕ್ಷ ಸ.ಬ.ಭಾಸ್ಕರ್‌, ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ಡಿ.ಸಿ. ಸಣ್ಣಸ್ವಾಮಿ, ಜೆಡಿಎಸ್‌ ಮುಖಂಡ ಯಾದ್‌ಗಾರ್‌ ಇಬ್ರಾಹಿಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT