ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಗದ್ದೆ, ತೋಟಗಳು ಜಲಾವೃತಗೊಂಡಿದ್ದು, ಮತ್ತೆ ನಷ್ಟದ ಭೀತಿ ಎದುರಾಗಿದೆ.
ಅರಸೀಕೆರೆ, ಚನ್ನರಾಯಪಟ್ಟಣ ತಾಲ್ಲೂಕಿನ ಹಲವೆಡೆ ಕೆರೆ,ಕಟ್ಟೆ ಒಡೆಯುವ ಆತಂಕ ಎದುರಾಗಿದೆ.ಕೆಂಬಾಳು ಬಳಿ ರಸ್ತೆ ಕೊಚ್ಚಿ ಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಮಾಡಾಳು ಸಮೀಪ ಮನೆಕುಸಿದು ಬಿದ್ದಿದೆ.
ಅರಸೀಕೆರೆ ತಾಲ್ಲೂಕಿನ ಗಂಡಸಿ ಹೋಬಳಿಯ ದೊಡ್ಡ ಕೆರೆ ಏರಿ ಬಿರುಕು ಬಿಟ್ಟಿದ್ದು, ಭೂಕುಸಿತಉಂಟಾಗುವ ಸಾಧ್ಯತೆ ಹೆಚ್ಚಿದೆ. ಬಸ್, ಲಾರಿಗಳ ಸಂಚಾರಕ್ಕಾಗಿ ಕೆಲ ವರ್ಷಗಳ ಹಿಂದೆಚಿಕ್ಕದಾಗಿದ್ದ ಕೆರೆ ಏರಿಯನ್ನು ದೊಡ್ಡ ಪ್ರಮಾಣದಲ್ಲಿ ನಿರ್ಮಿಸಲಾಗಿತ್ತು.
ಈ ಕೆರೆ ಏರಿ ರಸ್ತೆಯುಉರಿಗಿಲವಾಡಿ ಮತ್ತು ಗಂಡಸಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸಲಿದೆ. ಬಿರುಕು ಬಿಟ್ಟಿರುವುದರಿಂದ ವಾಹನ ಸಂಚಾರ ಬಂದ್ ಮಾಡಲಾಗಿದೆ. ಮುಂಜಾಗೃತವಾಗಿ ಬಿರುಕು ಬಿಟ್ಟ ಸ್ಥಳದಲ್ಲಿ ಮರಳಿನ ಚೀಲ ಜೋಡಿಸುವ ಕೆಲಸ ನಡೆಯುತ್ತಿದೆ.
‘ಕಳಪೆ ಕಾಮಗಾರಿಯಿಂದ ಕೆರೆ ಏರಿ ಬಿರುಕು ಬಿಟ್ಟಿದೆ. ಭೂ ಕುಸಿತ ಆಗುವ ಮುನ್ನ ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.
ತಹಶೀಲ್ದಾರ್ ಸಂತೋಷ್ ಕುಮಾರ್ ಹಾಗೂ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಾಲಕೃಷ್ಣ ಹಾಗೂ ಲೋಕೋಪಯೋಗಿ ಇಲಾಖೆಯಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಟೇಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಕೆಂಬಾಳು ಸೇತುವೆ ಸಮೀಪ ರಸ್ತೆ ಕುಸಿದು ಬಿದ್ದಿದ್ದು, ಕೆಂಬಾಳು–ತಿಪಟೂರು ಸಂಚಾರ ಬಂದ್ಆಗಿದೆ. ಬದಲಿ ಮಾರ್ಗವಾಗಿ ಕೆಂಬಾಳಿನಿಂದ ಬಿದರೆ ಮೂಲಕ ತಿಪಟೂರು ತಲುಪುವ ವ್ಯವಸ್ಥೆಮಾಡಲಾಗಿದೆ.
ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೃಹತ್ ಪೈಪ್ಅಳವಡಿಸಿ, ಪಕ್ಕದಲ್ಲೇ ಪರ್ಯಾಯ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.
ಬಾಗೂರು ಕೆರೆಯ ಕೋಡಿ ಬಿದ್ದು ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗಿದೆ.