‘ಜಿಲ್ಲೆಯು ಶಾಸನಗಳ ನೆಲೆವೀಡಾಗಿದ್ದು, ಅದರಲ್ಲೂ ವಿಶೇಷವಾಗಿ ಶ್ರವಣಬೆಳಗೊಳದಲ್ಲಿ ಸುಮಾರು 600 ಜೈನ ಶಾಸನ ಪತ್ತೆಯಾಗಿದೆ. ಆದರೆ ನಗರದಲ್ಲಿ ಯಾವುದೇ ಜೈನ ಶಾಸನಗಳು ಪತ್ತೆಯಾಗಿರಲಿಲ್ಲ. ಈ ಶಾಸನಗಳು ಜೈನ ಪರಂಪರೆಯ ಪುರಾತನ ಸಂಸ್ಕೃತಿ ತಿಳಿಸುತ್ತವೆ’ ಎಂದು ನಿತಿನ್ ಅಭಿಪ್ರಾಯಪಟ್ಟರು.
ಬಸದಿ ಜೀರ್ಣೋದ್ಧಾರದ ಸಮಯದಲ್ಲಿ ನೇಮಿನಾಥ ವಿಗ್ರಹ ತೆಗೆದು ಮತ್ತೊಂದು ಜಾಗದಲ್ಲಿ ಇರಿಸಲಾಗಿತ್ತು. ಹಿಂದೆ ಕಾಂಕ್ರೀಟ್ನಲ್ಲಿ ಮುಚ್ಚಿ ಹೋಗಿದ್ದ ಭಾಗದಲ್ಲಿ ಈ ಶಾಸನ ಬೆಳಕಿಗೆ ಬಂದಿದೆ.
ಬಸದಿಯ ಮೂಲ ಸ್ವಾಮಿ ಪಾರ್ಶ್ವನಾಥ ತೀರ್ಥಂಕರ ವಿಗ್ರಹವನ್ನು ಜೀರ್ಣೋದ್ಧಾರದ ಕಾರಣ ತೆಗೆದಿದ್ದರಿಂದ ಕಾಂಕ್ರೀಟ್ನಲ್ಲಿ ಮುಚ್ಚಿ ಹೋಗಿದ್ದ ಪೀಠದ ಭಾಗದಲ್ಲಿ ಶಾಸನ ಸಿಕ್ಕಿದೆ.
ದೊಡ್ಡ ಬಸದಿಯ ನವರಂಗ ಕಂಬವೊಂದರ ಮೇಲ್ಭಾಗದಲ್ಲಿ ಎರಡು ಸಾಲಿನ ಶಾಸನ ಹಾಗೂ ಕೆಳಭಾಗದಲ್ಲಿ ಕಾಯೋತ್ಸರ್ಗ ಭಂಗಿಯಲ್ಲಿ ನಿಂತಿರುವ ಜೈನ ಮುನಿಯ ಕೆತ್ತನೆಯಿದೆ. ಮುನಿಗಳ ಕೆತ್ತನೆ ಇರುವ ಕೆಳಭಾಗ ಕಾಂಕ್ರೀಟ್ ಹಾಗೂ ಮಾರ್ಬಲ್ ನಿಂದ ಮುಚ್ಚಲಾಗಿದೆ. ಈ ಭಾಗದಲ್ಲಿ ಶಾಸನ ಇದೆ.