ಮೊದಲೇ ಸೋಲೊಪ್ಪಿಕೊಂಡ ಜೆಡಿಎಸ್: ಸಿದ್ದರಾಮಯ್ಯ
ಹಾಸನ: ಬಸವಕಲ್ಯಾಣ ಹಾಗೂ ಮಸ್ಕಿ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದೆ ಜೆಡಿಎಸ್ ಮೊದಲೇ
ಸೋಲೊಪ್ಪಿಕೊಂಡಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಅರಸೀಕೆರೆ ತಾಲ್ಲೂಕಿನ ಮಂಗಳಾಪುರ ಗ್ರಾಮದಲ್ಲಿ ಮಂಗಳವಾರ ತಮ್ಮ ಆಪ್ತನ ಮಗನ ಮದುವೆ ಕಾರ್ಯಕ್ರಮಕ್ಕೆ ಬಂದಿದ್ದ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
‘ಅಭ್ಯರ್ಥಿ ಹಾಕುವುದಿಲ್ಲವೆಂದರೆ ಸೋಲೊಪ್ಪಿಕೊಂಡಂತೆ ಅಲ್ಲವೇ? ಆರ್.ಆರ್.ನಗರ ಶಿರಾ ಮತ್ತು ಕ್ಷೇತ್ರದಲ್ಲಿ ಹಿಂದಿನ
ಚುನಾವಣೆಯಲ್ಲಿ ಪಡೆದಷ್ಟು ಮತಗಳು ಜೆಡಿಎಸ್ಗೆ ಬಂದಿಲ್ಲ. ಹಾಗಿದ್ದರೆ ಅವರ ಮತಗಳು ಎಲ್ಲಿಗೆ ಹೋದವು. ಜೆಡಿಎಸ್ ದುರ್ಬಲಗೊಂಡಿರುವುದೇ ಬಿಜೆಪಿಗೆ ವರದಾನವಾಗಿದೆ’ ಎಂದು ಅಭಿಪ್ರಾಯಪಟ್ಟರು.
ಮುಂಬರುವ ಉಪ ಚುನಾವಣೆಗಳಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷದಲ್ಲಿ ಅಭ್ಯರ್ಥಿಗಳಿಲ್ಲ ಎಂಬ ಬಿ.ವೈ,. ವಿಜಯೇಂದ್ರ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ನಿಂದ ಗೆದ್ದಿದ್ದ ಪ್ರತಾಪ್ ಗೌಡ ಪಾಟೀಲ್ ರನ್ನು ಹಣಕೊಟ್ಟು ಕೊಂಡುಕೊಂಡು ಅಭ್ಯರ್ಥಿ ಮಾಡಿಕೊಂಡಿರುವುದು ಯಾರು? ಈ ರೀತಿ ಮಾತನಾಡುವುದಕ್ಕೆ ನಾಚಿಕೆ ಆಗಬೇಕು ಎಂದು ವಾಗ್ದಾಳಿ ನಡೆಸಿದರು.
ನಿಗಮ, ಮಂಡಳಿ, ಪ್ರಾಧಿಕಾರ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ವೈಜ್ಞಾನಿಕ ವರದಿ ಆಧರಿಸಿ ನಿಗಮ, ಪ್ರಾಧಿಕಾರ ರಚಿಸಬೇಕು. ರಾಜಕೀಯ ಲಾಭಕ್ಕಾಗಿ ಇಂತಹ ನಿರ್ಧಾರ ಕೈಗೊಳ್ಳಬಾರದು. ನಾನು ಯಾವುದೇ ಜಾತಿಯ ವಿರೋಧಿಯಲ್ಲ. ಎಲ್ಲಾ ಜಾತಿಯಲ್ಲೂ ಬಡವರಿದ್ದಾರೆ. ಎಲ್ಲರಿಗೂ ನ್ಯಾಯಸಿಗಬೇಕು’ ಎಂದರು.
ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆ ಸೋಲಿಗೆ ನಾನು ಕೂಡ ಕಾರಣ ಎಂದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.