ಹಾಸನ: ‘ಬಿಜೆಪಿ ಶಾಸಕ ಪ್ರೀತಂ ಗೌಡ ಅವರಿಗೆ ಶಾಸಕ ಎಚ್.ಡಿ.ರೇವಣ್ಣ ಅವರ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ’ ಎಂದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ದ್ಯಾವೇಗೌಡ ಹೇಳಿದರು.
‘ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ರೇವಣ್ಣ ಅವರ ಕೊಡುಗೆ ಏನು ಎಂಬುದು ಇಡೀ ಜನಗೆ ತಿಳಿದಿದೆ. ಹಾಗೆಯೇ ಅಭಿವೃದ್ಧಿ ಬಗ್ಗೆ ಪ್ರೀತಂ ಅವರು ರೇವಣ್ಣ ಅವರಿಂದ ಕಲಿಯುವುದು ಬಹಳಷ್ಟಿದೆ’ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.
‘ರೇವಣ್ಣ ಅವರು ಉನ್ನತ ಶಿಕ್ಷಣ ಪಡೆಯದಿದ್ದರೂ ಅವರ ಕ್ಷೇತ್ರ ಮತ್ತು ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿ ಮಾಡಿದ್ದಾರೆ. ಇದನ್ನು ತಿಳಿದುಕೊಳ್ಳಬೇಕು’ ಎಂದರು.
‘ಈಗ ತಾಕತ್ ಬಗ್ಗೆ ಮಾತನಾಡುವ ಪ್ರೀತಂ ಗೌಡ, ವಿಧಾನ ಪರಿಷತ್ ಚುನಾವಣೆ ಅವಧಿಯಲ್ಲಿ ತಮ್ಮ ಬಲಾಬಲ ಏನು ಎಂಬುದನ್ನು ತೋರಿಸಬೇಕಿತ್ತು. ಆಗ ಶಾಸಕರ ತಾಕತ್ತು, ಪೌರುಷ ಎಲ್ಲಿ ಹೋಗಿತ್ತು’ ಎಂದು ಪ್ರಶ್ನಿಸಿದರು.
‘ಹೇಮಗಂಗೋತ್ರಿ ಬಳಿ ಟ್ರಕ್ ಟರ್ಮಿನಲ್ ನಿರ್ಮಿಸುವುದು ಸೂಕ್ತವಲ್ಲ. ವಿದ್ಯಾರ್ಥಿಗಳು ಸುರಕ್ಷತೆ ದೃಷ್ಟಿಯಿಂದ ಯೋಗ್ಯವಾಗಿಲ್ಲ ಎಂಬುದು ಸಾಮಾನ್ಯ ವ್ಯಕ್ತಿಗೂ ತಿಳಿಯುತ್ತದೆ. ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂಬಂತೆ ಶಾಸಕರು ತಮ್ಮ ನಡವಳಿಕೆ ಪ್ರದರ್ಶನ ಮಾಡುತ್ತಿದ್ದಾರೆ’ ಎಂದರು.
‘ಪ್ರೀತಂ ಅವರ ಅಹಂಕಾರ, ದರ್ಪಕ್ಕೆ ಕ್ಷೇತ್ರದ ಜನ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡರಾದ ಇರ್ಷಾದ್, ಜಯಣ್ಣ, ಜಯರಾಂ, ಪ್ರಸಾದ್ ಗೌಡ, ರಘು ಹೊಂಗೆರೆ ಇದ್ದರು.