ಹಾಸನ: ತಾಲ್ಲೂಕಿನ ಕಟ್ಟಾಯ ಹೋಬಳಿ ಮುಕುಂದೂರು ಗ್ರಾಮದ ಅರಣ್ಯ ಪ್ರದೇಶದಲ್ಲಿ ಐದಾರು ವರ್ಷದ ಗಂಡು ಚಿರತೆ ಮೃತದೇಹ ಪತ್ತೆಯಾಗಿದೆ.
ಗ್ರಾಮಸ್ಥರು ವಿಷಯ ತಿಳಿಸಿದ ಮೇರೆಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ವಲಯ ಅರಣ್ಯಾಧಿಕಾರಿ ಜಗದೀಶ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.
‘ಚಿರತೆಯ ತಲೆ, ಹೊಟ್ಟೆ, ಕಾಲು ಹಾಗೂ ಶ್ವಾಸಕೋಶದಲ್ಲಿ ಗಾಯವಾಗಿದೆ. ಎರಡು ಚಿರತೆಗಳ ನಡುವಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಸಾವಿಗೀಡಾಗಿರುವ ಸಾಧ್ಯತೆ ಇದೆ. ಇದರಲ್ಲಿ ಮನುಷ್ಯರ ಕೈವಾಡ ಇಲ್ಲ’ ಎಂದು ಡಿಎಫ್ಒ ಸ್ಪಷ್ಟಪಡಿಸಿದರು.
ವನ್ಯಜೀವಿ ವೈದ್ಯ ಮುರುಳೀಧರ್ ಅವರು ಗೆಂಡೆಕಟ್ಟೆ ಅರಣ್ಯದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅದನ್ನು ಸುಟ್ಟು ಹಾಕಲಾಯಿತು.