ಹಾಸನ: ಅಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ನಗರಾದಾದ್ಯಂತ ಶನಿವಾರ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ನಗರದ ಪ್ರಮುಖ ಬೀದಿಗಳು, ಮಾರುಕಟ್ಟೆ ಪ್ರದೇಶ, ಮಸೀದಿ, ಚರ್ಚ್, ದೇವಸ್ಥಾನ ಹಾಗೂ ಮುಸ್ಲಿಮರು ಹೆಚ್ಚಿನ ಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿತ್ತು.
ಪೊಲೀಸ್ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅವರು ಹಲವು ಪ್ರದೇಶಗಳಲ್ಲಿ ಸಿಬ್ಬಂದಿ ಜತೆ ಗಸ್ತು ತಿರುಗಿದರು.
ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರಜೆ ಘೋಷಿಸಿದ್ದರೂ ಕೆಲ ಮಕ್ಕಳು ಶಾಲೆಗೆ ಬಂದು ವಾಪಸ್ ಹೋದರು. 144 ಸೆಕ್ಷನ್ ಜಾರಿ ಹಿನ್ನಲೆಯಲ್ಲಿ ವಿಜಯೋತ್ಸವ ಹಾಗೂ ಪ್ರತಿಭಟನೆ ನಿಷೇಧಿಸಲಾಗಿತ್ತು. ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿತ್ತು.
ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿದರು. ಜನ ಹಾಗೂ ವಾಹನ ಸಂಚಾರ ಎಂದಿನಿಂತೆ ಇತ್ತು. ಈದ್ ಮಿಲಾದ್ ಹಿನ್ನಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ನ. 10ರಂದು ಸಹ ಮದ್ಯ ಮಾರಾಟ ನಿಷೇಧಿಸಿದೆ.