ಬೆಂಗಳೂರು: ರಾಜ್ಯದ ವಿವಿದೆಡೆ ಬುಧವಾರ ಬಿರುಗಾಳಿ, ಗುಡುಗು ಸಹಿತ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ರಿಪ್ಪನ್ಪೇಟೆ ಸುತ್ತಮುತ್ತ ಕಳೆದ ಎರಡು ದಿನಗಳಿಂದ ಬೀಸಿದ ಗಾಳಿ ಹಾಗೂ ಮಳೆಯಿಂದ 52 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ.
ಉಡುಪಿ ಜಿಲ್ಲೆ ಹೆಬ್ರಿ ಪರಿಸರದಲ್ಲಿ ಬುಧವಾರ ಸಂಜೆ ಸಿಡಿಲು ಸಹಿತ ಗಾಳಿ ಮಳೆ ಸುರಿದಿದೆ. ಇಲ್ಲಿನ ತಾಲ್ಲೂಕು ಕಚೇರಿ ಎದುರು ಸರ್ಕಾರಿ ಮಾದರಿ ಶಾಲೆ ಮುಂಭಾಗದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ 4 ವಾಹನಗಳು ಜಖಂಗೊಂಡಿವೆ. ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ಶೃಂಗೇರಿ ಭಾಗದಲ್ಲೂ ಮಳೆ ಆಗಿದೆ.
ಸಾಧಾರಣ ಮಳೆ: ಕೊಡಗು ಜಿಲ್ಲೆಯ ವಿವಿಧೆಡೆ ಬುಧವಾರ ಸಾಧಾರಣ ಮಳೆ ಸುರಿಯಿತು. ಮಂಗಳವಾರ ಸಹ ಮಳೆಯಾಗಿತ್ತು. ಮಧ್ಯಾಹ್ನ ಮಡಿಕೇರಿಯಲ್ಲಿ ಎರಡು ತಾಸು ಗುಡುಗು ಸಹಿತ ಮಳೆ ಸುರಿಯಿತು. ಭಾಗಮಂಡಲ, ತಲಕಾವೇರಿ, ನಾಪೋಕ್ಲು ವ್ಯಾಪ್ತಿಯಲ್ಲೂ ತುಂತುರು ಮಳೆಯಾಗಿದೆ.
ಉತ್ತಮ ಮಳೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕು ಹಾಗೂ ರಿಪ್ಪನ್ಪೇಟೆಯಲ್ಲಿ ಉತ್ತಮ ಮಳೆಯಾಗಿದೆ.
ಹಾವೇರಿಯಲ್ಲಿ ಬುಧವಾರ ಸಂಜೆ ಸಿಡಿಲು ಸಹಿತ ಮಳೆಯಾಗಿದೆ. ನಗರ ಹೊರವಲಯದ ರಾಣೆಬೆನ್ನೂರು ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಯ ಮೇಲೆ ಹುಣಸೆ ಮರವೊಂದು ಬಿದ್ದಿದ್ದರಿಂದ ಕೆಲಕಾಲ ವಾಹನ ಸಂಚಾರ ವ್ಯತ್ಯಯವಾಗಿತ್ತು.