ಹಾಸನ: ಕೈಗಾರಿಕೆಗೆ ಜಮೀನು ವಶಪಡಿಸಿಕೊಳ್ಳುವುದನ್ನುವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಅರಸೀಕೆರೆ ತಾಲ್ಲೂಕಿನ ಮೈಲನಹಳ್ಳಿ ಗ್ರಾಮಸ್ಥರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ತಾಲ್ಲೂಕಿನ ಮೈಲನಹಳ್ಳಿ, ಹುಣಸೆಘಟ್ಟ ಗ್ರಾಮಗಳಲ್ಲಿ 142 ಎಕರೆ ರೈತರ ಜಮೀನನ್ನು ಕೆಐಎಡಿಬಿ ವಶಪಡಿಸಿ ಕೊಳ್ಳಲು ಮುಂದಾಗಿದ್ದು, ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಬಾರದು ಎಂದು ಒತ್ತಾಯಿಸಿದರು.
ಈಗಾಗಲೇ ಗ್ರಾಮದಲ್ಲಿ ಸುಮಾರು 70 ಎಕರೆ ಜಮೀನನ್ನು ಎತ್ತಿನಹೊಳೆ, ಗ್ಯಾಸ್ ಪೈಪ್ಲೈನ್, ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೆ ಯೋಜನೆಗಳಿಗೆ ಭೂಮಿಯನ್ನು ಬಿಟ್ಟುಕೊಟ್ಟಿದ್ದು, ಉಳಿಕೆ ಅಲ್ಪ ಸ್ವಲ್ಪ ಜಮೀನು ಜೀವನಕ್ಕೆ ದಾರಿಯಾಗಿರುವುದರಿಂದ ಯಾವುದೇ ಕಾರಣಕ್ಕೂ ಭೂಮಿಯನ್ನು ಮುಂದಿನ ಯೋಜನೆಗೆ ಪಡೆದುಕೊಳ್ಳಬಾರದು ಎಂದು ಆಗ್ರಹಿಸಿದರು.
ಕೆಐಎಡಿಬಿ ಮೈಸೂರು ಕಚೇರಿ, ಸ್ಥಳೀಯ ಶಾಸಕರು ಹಾಗೂ ಜಿಲ್ಲಾಧಿಕಾ ರಿಗೂ ತಕಾರರು ಅರ್ಜಿ ಸಲ್ಲಿಸಿದರೂ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳಿಂದ ನೋಟಿಸ್ ಸಹ ಪಡೆದುಕೊಂಡಿಲ್ಲ. ಆದರೂ ಅಧಿಕಾರಿಗಳು ಎಕರೆಗೆ ₹ 18 ಲಕ್ಷ ನಿಗದಿ ಪಡಿಸಿ, ನೋಟಿಸ್ ನೀಡಲು ಮುಂದಾಗಿದ್ದಾರೆ. ಕೂಡಲೇ ಈ ಪ್ರಸ್ತಾವ ಕೈ ಬಿಡಬೇಕು ಎಂದು ಮನವಿ ಮಾಡಿದರು.