ಹೆತ್ತೂರು: ಹೋಬಳಿಯ ಪಶ್ಚಿಮಘಟ್ಟದ ತಪ್ಪಲಿನ ಕಲ್ಲುತೋಟ ಗ್ರಾಮದಲ್ಲಿ ಚಿರತೆ ಓಡಾಡಿರುವ ಹೆಜ್ಜೆಯ ಗುರುತುಗಳು ಕಂಡು ಬಂದಿದ್ದು ಇದರಿಂದಾಗಿ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ವಳಲಹಳ್ಳಿ ಗ್ರಾ.ಪಂ ವ್ಯಾಪ್ತಿಯ ಜೇಡಿಗದ್ದೆ ಪಕ್ಕದ ಕಲ್ಲುತೋಟದ ದ್ಯಾವಪ್ಪಗೌಡ ಎಂಬುವರ ಮನೆಯ ಸುತ್ತಮುತ್ತ ಚಿರತೆ ಓಡಾಡಿರುವ ಗುರುತುಗಳು ಕಂಡು ಬಂದಿವೆ.
ಜೇಡಿಗದ್ದೆ ಹಾಗೂ ಕಲ್ಲುತೋಟ ಗ್ರಾಮಗಳು ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದು ಬೆರಳೆಣಿಕೆಯಷ್ಟು ಕುಟುಂಬಗಳು ಗ್ರಾಮದಲ್ಲಿ ನೆಲೆಸಿವೆ. ಗ್ರಾಮದ ಸುತ್ತಮುತ್ತ ಚಿರತೆ, ಕಾಡಾನೆ, ಕಾಡೆಮ್ಮೆ ಸೇರಿದಂತೆ ಇತರ ಕಾಡು ಪ್ರಾಣಿಗಳು ಹೆಚ್ಚಾಗಿದ್ದು ಇದು ಜನರಲ್ಲಿ ಹೆಚ್ಚು ಆತಂಕ ಮೂಡಿಸಿದೆ.