ಹಾಸನ: ಕೇಂದ್ರ ಸರ್ಕಾರದ ಅವೈಜ್ಞಾನಿಕ ನಿರ್ಧಾರದಿಂದ ಎಲ್ಐಸಿ ಹಾದಿ ತಪ್ಪುತ್ತಿದ್ದು, ಹೊಸ ಕಾನೂನು ಜಾರಿಗೊಳಿಸದೆ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಒಕ್ಕೂಟದಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಎಲ್ಲವನ್ನು ಆನ್ಲೈನ್ ಮಾಡಿರುವುದರಿಂದ ದಶಕಗಳಿಂದ ಏಜೆಂಟರಾಗಿ ಕೆಲಸ ಮಾಡುತ್ತಿರುವವರು ತೊಂದರೆಗೆ ಸಿಲುಕಿದ್ದಾರೆ. ನೇರ ಮಾರುಕಟ್ಟೆಯಿಂದ ಪಾಲಿಸಿದಾರರನ್ನು ಸಂಪರ್ಕ ಮಾಡುವ ಪ್ರಕ್ರಿಯೆ ಬಿಡಬೇಕು. ಪಾಲಿಸಿದಾರರ ಗ್ರಾಚ್ಯುಟಿ ₹10 ಲಕ್ಷ ರೂ.ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಎಲ್ಲಾ ವಿಮೆಯ ಹಣಕಾಸು ವ್ಯವಹಾರಗಳ ಮೇಲೆ ವಿಧಿಸಲಾಗುತ್ತಿರುವ ಬಡ್ಡಿ ದರ ಕಡಿಮೆ ಮಾಡಬೇಕು. ವಿಮಾ ಕ್ಷೇತ್ರದಲ್ಲಿ ವಿದೇಶಿ ಬಂಡವಾಳ ಪ್ರಮಾಣದ ಮಿತಿಯನ್ನು ಶೇಕಡಾ 74ಕ್ಕೆ ಹೆಚ್ಚಿಸಿದ್ದು, ಅದನ್ನು ವಾಪಸ್ ಪಡೆಯಬೇಕು. ಎಲ್ಐಸಿಯಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಅನುವು ಮಾಡಿಕೊಡಬಾರದು ಎಂದರು.
ಪ್ರತಿಭಟನೆಯಲ್ಲಿ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಕೆ. ಗೋವಿಂದರಾಜು, ಉಪಾಧ್ಯಕ್ಷ ಅರುಣ್ ಕುಮಾರ್, ಖಜಾಂಚಿ ರವೀಶ್, ಮಂಜುನಾಥ್, ಲೋಕೇಶ್, ಎಚ್.ಆರ್. ಕೃಷ್ಣಕುಮಾರ್, ತಿರುಮಲಗೌಡ, ಜಯರಾಂ ಹಾಗೂ ಇತರರು ಇದ್ದರು.