ಹಾಸನ: ಕೊರೊನಾ ಲಾಕ್ಡೌನ್ನಿಂದ ಭಾನುವಾರ ನಗರ ಸ್ತಬ್ಧಗೊಂಡಿತ್ತು. ಪ್ರಮುಖ ರಸ್ತೆಗಳಲ್ಲಿ ಜನಸಂಚಾರವಿಲ್ಲದೆ ಬಿಕೋ ಎನ್ನುತ್ತಿತ್ತು.
ಬಹುತೇಕ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ನಗರದ ಕಟ್ಟಿನಕೆರೆ ಮಾರುಕಟ್ಟೆ ಕಸ್ತೂರ ಬಾ ರಸ್ತೆ, ದೊಡ್ಡ ಗರಡಿ ಬೀದಿ, ನಗರ ಸಾರಿಗೆ ಬಸ್ ನಿಲ್ದಾಣ, ಹೊಸ ಬಸ್ ನಿಲ್ದಾಣಗಳಲ್ಲಿ ಬಿಕೋ ಎನ್ನುವ ವಾತಾವರಣ ಕಂಡು ಬಂತು. ಪ್ರಮುಖ ವೃತ್ತದಲ್ಲಿ ಪೊಲೀಸರನ್ನು ನಿಯೋಜಿಸಿ, ಎಲ್ಲೆಡೆ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಅನಗತ್ಯ ಹೊರಗೆ ಓಡಾಡುತ್ತಿರುವವರಿಗೆ ಎಚ್ಚರಿಕೆ ನೀಡಿ ಮನೆಗೆ ಕಳುಹಿಸಿದರು.
ಸಾರಿಗೆ ಸಂಸ್ಥೆ ಬಸ್ಗಳು, ಆಟೊ ರಸ್ತೆಗೆ ಇಳಿಯಲಿಲ್ಲ. ಬೆಳಿಗ್ಗೆ ಎಂದಿನಂತೆ ದಿನಪತ್ರಿಕೆ, ಹಾಲು ಪೂರೈಕೆಯಾಯಿತು. ತುರ್ತು ಸೇವೆಗಳಾದ ಆಸ್ಪತ್ರೆ, ಕ್ಲಿನಿಕ್, ಔಷಧ ಮಳಿಗೆ, ಪೆಟ್ರೋಲ್ ಬಂಕ್ ಎಂದಿನಂತೆ ತೆರೆದಿದ್ದವು. ಕೆಲವೆಡೆ ದಿನಸಿ, ಮಾಂಸದ ಅಂಗಡಿಗಳು ವಹಿವಾಟು ನಡೆಸಿವೆ.
ಬೆಳಿಗ್ಗೆಯಿಂದ ಸುರಿದ ತುಂತುರು ಮಳೆಗೆ ಜನರು ಸಹ ಹೊರಗೆ ಬರಲಿಲ್ಲ. ಸಂಜೆ ಬಳಿಕ ಕೆಲ ರಸ್ತೆಗಳಲ್ಲಿ ವಾಹನಗಳು ಕಂಡು ಬಂದವು.