ಅರಸೀಕೆರೆ: ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಮೂವರು ಯುವಕರನ್ನು ನಗರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದ ಜೇನುಕಲ್ಲು ಬಡಾವಣೆಯ ನಿವಾಸಿಗಳಾದ ಸುಲ್ತಾನ್ (20), ಸೈಫ್ ಖಾನ್ (20), ಇಬ್ರಾಹಿಂ (20) ಆರೋಪಿಗಳು.
ನಗರದಲ್ಲಿ ಗಾಂಜಾ ಮಾರಾಟ ದಂಧೆ ನಡೆಯುತ್ತಿದೆ ಎಂದು ಸಾರ್ವ ಜನಿಕರು ದೂರಿದ್ದರಿಂದ ಸಿಪಿಐ ಚಂದ್ರ ಶೇಖರಯ್ಯ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದರು. ನಗರದ ಯಾದಾಪುರ ರಸ್ತೆಯಲ್ಲಿರುವ ಜೇನುಕಲ್ಲು ಕ್ರೀಡಾಂಗಣದ ಪಕ್ಕದಲ್ಲಿ ಆಟೊದಲ್ಲಿ ಯುವಕರು ಗಾಂಜಾ ಮಾರಾಟ ಮಾಡುತ್ತಿದ್ದರು. ಬಂಧಿತರಿಂದ ಸುಮಾರು 30 ರಿಂದ 40 ಪ್ಯಾಕೆಟ್ (ಸುಮಾರು 150 ಗ್ರಾಂ) ಗಾಂಜಾ ವಶಪಡಿಸಿಕೊಳ್ಳಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಹಶೀಲ್ದಾರ್ ಸಂತೋಷ್ ಕುಮಾರ್ ಪರಿಶೀಲನೆ ನಡೆಸಿ, ತಾಲ್ಲೂಕಿನಲ್ಲಿ ಅಕ್ರಮ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಗರ ಪೊಲೀಸ್ ಠಾಣೆಯ ಪಿಎಸ್ಐ ತಿಮ್ಮಯ್ಯ, ಪೊಲೀಸ್ ಸಿಬ್ಬಂದಿ ಸಿದ್ದೇಶ್, ಹರೀಶ್, ಕೀರ್ತಿ ಕುಮಾರ್, ವಸಂತ್ ಕುಮಾರ್, ಅಪರಾಧ ವಿಭಾಗದ ಸಿಬ್ಬಂದಿ ಮಂಜೇಗೌಡ, ರಮೇಶ್ ತಂಡದಲ್ಲಿದ್ದರು.