ಹಾಸನ: ನಗರದ ಮಹಾರಾಜ ಉದ್ಯಾನದಲ್ಲಿ ಕುಡಿದ ಮತ್ತಿನಲ್ಲಿ ಕಾಲೇಜು ಹುಡುಗಿಯ ಕೈ ಹಿಡಿದು ಎಳೆದಾಡಿದ ಎಂಬ ಆರೋಪದ ಕಾರಣಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿ, ಬೆತ್ತಲೆಮೆರವಣಿಗೆ ಮಾಡಲಾಗಿದೆ.
ಮಂಗಳವಾರ ಸಂಜೆ ಉದ್ಯಾನದಲ್ಲಿ ವಿದ್ಯಾರ್ಥಿನಿ ಕುಳಿತಿದ್ದಾಗ ವಿಜಯಪುರದ ಕೂಲಿ ಕಾರ್ಮಿಕ ಕೈ ಹಿಡಿದು ಎಳೆದಾಡಿದ್ದಾನೆ ಎಂದು ಆರೋಪಿಸಿ ಕರ್ನಾಟಕ ಪ್ರಜಾಶಕ್ತಿ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಗೌಡ ಸೇರಿದಂತೆ ಯುವಕರ ಗುಂಪು ಆತನನ್ನು ಥಳಿಸಿತು. ನಂತರ ವಿವಸ್ತ್ರಗೊಳಿಸಿ, ನಡುರಸ್ತೆಯಲ್ಲಿಯೇ ನಡೆಸಿಕೊಂಡು ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು.
ಅದನ್ನು ಸಾರ್ವಜನಿಕರು ಆಕ್ಷೇಪಿಸಿ, ಬಟ್ಟೆ ನೀಡುವಂತೆ ಹೇಳಿದರೂಯುವಕರ ಗುಂಪು ಕೇಳಲಿಲ್ಲ.ಅಷ್ಟರಲ್ಲಿ ಬಂದ ಪೊಲೀಸರು ಯುವಕನನ್ನು ವಶಕ್ಕೆ ಪಡೆದು, ಜೀಪಿನಲ್ಲಿ ಠಾಣೆಗೆ ಕರೆದೊಯ್ದರು.‘ವಿಚಾರಣೆ ನಡೆದಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.