ಹಾಸನ: ಏ. 22ರಂದು ವಿಶ್ವ ಭೂ ದಿನದ ಅಂಗವಾಗಿ ಸಾರ್ವಜನಿಕ ವಾಹನ ಹೊರತು ಪಡಿಸಿ ಉಳಿದೆಲ್ಲ ವಾಹನಗಳ ಸಂಚಾರ ಸ್ಥಗಿತಗೊಳಿಸಿ ಪರಿಸರಪ್ರಿಯ ಕಾರ್ಯಕ್ರಮಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಹಸಿರುಭೂಮಿ ಪ್ರತಿಷ್ಠಾನದ ಗೌರವಾಧ್ಯಕ್ಷ ಎಚ್.ಎಲ್.ನಾಗರಾಜ್ ಮನವಿ ಮಾಡಿದರು.
ಪರಿಸರ ನಾಶದಿಂದ ತಾಪಮಾನ ಏರಿಕೆ, ಮಳೆ ಕೊರತೆ, ಕುಡಿಯುವ ನೀರಿಗೆ ಹಾಹಾಕಾರ, ಪ್ರಕೃತಿ ವಿಕೋಪದಂತಹ ಸಮಸ್ಯೆ ಹೆಚ್ಚುತ್ತಿದ್ದು, ಸಮಾಜ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಘೋರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಸೋಮವಾರ ಬೆಳಗ್ಗೆ 9 ಗಂಟೆಗೆ ಜಾಗೃತಿ ಜಾಥಾ ಏರ್ಪಡಿಸಿದ್ದು, ನಗರದ ಹೇಮಾವತಿ ಪ್ರತಿಮೆ ಬಳಿ ಪ್ರತಿಜ್ಞಾವಿಧಿ ಸ್ವೀಕರಿಸಿ ಕಸ್ತೂರಬಾ ರಸ್ತೆ, ಪಿಕ್ಚರ್ ಪ್ಯಾಲೇಸ್, ಆರ್.ಸಿ ರಸ್ತೆ ಮಾರ್ಗವಾಗಿ ಜಾಥಾವು ಜಿಲ್ಲಾಧಿಕಾರಿ ಕಚೇರಿ ತಲುಪಲಿದೆ. ನಂತರ ಜವೇನಹಳ್ಳಿ ಕೆರೆಯಲ್ಲಿ ಸಸಿ ನೆಟ್ಟು ಕಾರ್ಯಕ್ರಮ ಅಂತ್ಯಗೊಳಿಸಲಾಗುವುದು. ಸೈಕಲ್ ಜಾಥಾವನ್ನೂ ಏರ್ಪಡಿಸಲಾಗಿದೆ ಎಂದರು.
ಏ.22ರ ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಯಾರೂ ಸ್ವಂತ ವಾಹನಗಳಲ್ಲಿ ಸಂಚಾರ ನಡೆಸದೆ ಒಂದು ದಿನದ ಮಟ್ಟಿಗೆ ಕಾರು, ಬೈಕ್ಗಳನ್ನು ಆ ದಿನ ರಸ್ತೆಗಿಳಿಸಿಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಗೋಷ್ಠಿಯಲ್ಲಿ ಡಾ.ಸಾವಿತ್ರಿ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ಟಿ.ಗುರುರಾಜ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎಂ.ಶ್ರೀನಿವಾಸ್, ಜೆ.ಪಿ.ಶೇಖರ್ , ಡಾ.ಶಿವಪ್ರಸಾದ್ ಇದ್ದರು.