ಹಾಸನ: ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು- ಮಂಗಳೂರು ರಸ್ತೆಯಲ್ಲಿ ಗಂಟೆಗೆ 30 ಕಿ.ಮೀ ವೇಗದಲ್ಲಿ ಲಘು ವಾಹನಗಳ ಸಂಚಾರಕ್ಕೆ ಜಿಲ್ಲಾಧಿಕಾರಿ ಆರ್.ಗಿರೀಶ್ ಅನುಮತಿ ನೀಡಿ ಆದೇಶ ಹೊರಡಿಸಿದ್ದಾರೆ.
ಕಾರು, ಜೀಪ್, ಟೆಂಪೊ, ಮಿನಿ ವ್ಯಾನ್, ದ್ವಿಚಕ್ರ ವಾಹನಗಳು, ಅಂಬುಲೆನ್ಸ್ ಹಾಗೂ ಸಾರ್ವಜನಿಕರು ಸಂಚರಿಸುವ ಬಸ್ಗಳಿಗೆ ಅನುಮತಿ ನೀಡಲಾಗಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಸಂಚರಿಸುವ ವಾಹನಗಳು ಆನೆಮಹಲ್ ಕೆಸಗಾನಹಳ್ಳಿ - ಕ್ಯಾನಹಳ್ಳಿ - ಹೆಗ್ಗದ್ದೆ ಮಾರ್ಗದ ಮೂಲಕ ಹೋಗಬಹುದು.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ವಾಹನಗಳು ಮಾರ್ಗ-1 ರಲ್ಲಿ ಮಾರನಹಳ್ಳಿ - ಕ್ಯಾಮನಹಳ್ಳಿ - ಹಾರ್ಲೆ ಕೂಡಿಗೆ - ಆನೆಮಹಲ್ ಮಾರ್ಗದ ಮೂಲಕ ಸಂಚರಿಸಬಹುದು. ಹಾಗೇಯೇ ಮಾರ್ಗ -2ರಲ್ಲಿ ದೊಡ್ಡತಪ್ಪಲೆ - ಕುಂಬರಡಿ - ಹಾರ್ಲೆ ಕೂಡಿಗೆ - ಆನೆಮಹಲ್ ಮಾಲಕ ಬೆಂಗಳೂರು ಕಡೆಗೆ ಸಂಚರಿಸಬಹುದು ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75ರ ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿ ಈ ಹಿಂದೆ ದೋಣಿಗಲ್ ನಿಂದ ಶಿರಾಡಿ ಘಾಟ್ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಈಗ ಲಘು ವಾಹನಗಳ ಸಂಚಾರಕ್ಕೆ ಅನುಮತಿ ನೀಡಿದ್ದು, ಭಾರಿ ವಾಹನಗಳ ಸಂಚಾರನಿರ್ಬಂಧಿಸಲಾಗಿದೆ.