ಹಾಸನ: ಸಾಲ ಮರು ಪಾವತಿಸುವಂತೆ ಬ್ಯಾಂಕ್ಗಳು ನೋಟಿಸ್ ನೀಡಿರುವುದನ್ನು ಖಂಡಿಸಿ ಎಪಿಎಂಸಿ ಕಚೇರಿ ಎದುರು ರೈತರು ನೋಟಿಸ್ ಪ್ರತಿಯನ್ನು ಸುಟ್ಟು ಹಾಕಿದರು.
‘ರೈತರ ಬೆಳೆ ಸಾಲ ಮನ್ನಾ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಅರಸೀಕೆರೆ ತಾಲ್ಲೂಕಿನಲ್ಲಿ ಕೆನರಾ ಬ್ಯಾಂಕ್ ಅಧಿಕಾರಿಗಳು ಕೋರ್ಟ್ ಮೂಲಕ ರೈತರಿಗೆ ನೋಟಿಸ್ ಜಾರಿ ಮಾಡಿ, ಹಾಜರಾಗುವಂತೆ ಬೆದರಿಕೆ ಹಾಕುತ್ತಿದ್ದಾರೆ ಸರ್ಕಾರದ ಹೇಳಿಕೆಗೂ, ತಮಗೂ ಸಂಬಂಧವೇ ಇಲ್ಲದಂತೆ ಬ್ಯಾಂಕ್ ಅಧಿಕಾರಿಗಳು ವರ್ತಿಸುತ್ತಿದ್ದಾರೆ’ ಎಂದು ಪ್ರತಿಭಟನಾಕಾರು ಆಕ್ರೋಶ ವ್ಯಕ್ತಪಡಿಸಿದರು.
‘ಕೋರ್ಟ್ಗೂ ರೈತರು ಪಡೆದ ಸಾಲಕ್ಕೂ ಯಾವ ಸಂಬಂಧ ಇರುವುದಿಲ್ಲ. ಹಾಗಾಗಿ ನ್ಯಾಯಾಲಯಕ್ಕೆ ಹಾಜರಾಗುವ ಪ್ರಶ್ನೆಯೇ ಇಲ್ಲ. ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು. ಸಾಲಮನ್ನಾ ಆದೇಶ ತಕ್ಷಣ ಜಾರಿಗೆ ತರಬೇಕು. ಬ್ಯಾಂಕ್ಗಳಿಗೆ ಸರಿಯಾದ ಸೂಚನೆ ನೀಡಬೇಕು’ ಎಂದು ಒತ್ತಾಯಿಸಿದರು.
‘ಸಾಲಬಾಧೆ ತಾಳಲಾರದೇ ರೈತ ಬಸವೇಗೌಡ ಆತ್ಮಹತ್ಯೆ ಮಾಡಿಕೊಂಡು 8 ತಿಂಗಳಾದರೂ ಸರ್ಕಾರದಿಂದ ಪರಿಹಾರ ಬಂದಿಲ್ಲ. ಮೃತನ ಕುಟುಂಬ ಕಡು ಬಡತನದಲ್ಲಿದ್ದು, ಜೀವನ ಸಾಗಿಸುವುದು ಕಷ್ಟಕವಾಗಿದೆ. ಸಾಲದ ದಾಖಲೆ ನೀಡಿದರೂ ಪರಿಹಾರ ಕೊಡದೇ ಜಿಲ್ಲಾಡಳಿತ ಸತಾಯಿಸುತ್ತಿದೆ’ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಕೊಟ್ಟೂರು ಶ್ರೀನಿವಾಸ್ ದೂರಿದರು.
‘ಬೆಲೆ ವಿಮೆ ಸಹ ಹಲವು ರೈತರಿಗೆ ಸಿಕ್ಕಿಲ್ಲ. ರೈತರ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ’ ಮನವಿ ಮಾಡಿದರು.
ಇದಕ್ಕೂ ಮುನ್ನ ನಡೆದ ಸಭೆಯಲ್ಲಿ, ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಬೇಡಿಕೆ ಈಡೇರದಿದ್ದರೆ ಪ್ರತಿಭಟನೆ ನಡೆಸುವ ನಿರ್ಧಾರ ಕೈಗೊಳ್ಳಲಾಯಿತು.