ಬೆಂಗಳೂರು: ಕಾಗಿನೆಲೆ ಕನಕ ಗುರುಪೀಠದ ರಜತ ಮಹೋತ್ಸವ ಹರಿಹರದ ಬೆಳ್ಳೂಡಿಯ ಶಾಖಾ ಮಠದಲ್ಲಿ ಇದೇ 8 ಮತ್ತು 9ರಂದು ನಡೆಯಲಿದೆ.
ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಮತ್ತು ಕರ್ನಾಟಕ ಪ್ರದೇಶ ಕುರುಬರ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮಹೋತ್ಸವದ ನೆನಪಿಗಾಗಿ ನಿರ್ಮಿಸಿರುವ ತರಬೇತಿ ಕೇಂದ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ 9ರಂದು ಉದ್ಘಾಟಿಸುವರು ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ತಿಳಿಸಿದರು.
ಬೆಂಗಳೂರು, ಮೈಸೂರು, ಕಲಬುರ್ಗಿ, ಬೆಳಗಾವಿಯಲ್ಲಿ ನಾಲ್ಕು ಶಾಖಾ ಮಠ ಈಗಾಗಲೇ ಇವೆ. ಬೆಳ್ಳೂಡಿಯಲ್ಲಿ ₹ 2 ಕೋಟಿ ವೆಚ್ಚದಲ್ಲಿ ಶಾಖಾ ಮಠ ಸ್ಥಾಪಿಸಲಾಗಿದ್ದು, ಈ ಮಠವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಇಲ್ಲಿ ರಜತ ಮಹೋತ್ಸವ ಆಯೋಜಿಸಲಾಗಿದೆ ಎಂದರು.
₹ 10 ಕೋಟಿ ವೆಚ್ಚದ ವಿದ್ಯಾರ್ಥಿನಿಲಯ ನಿರ್ಮಾಣಕ್ಕೆ ಮುಖ್ಯಮಂತ್ರಿ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸುವರು ಎಂದೂ ರೇವಣ್ಣ ಹೇಳಿದರು.