ಹಾಸನ: ಪುಟ್ಟ ಮಕ್ಕಳು, ಶಾಲೆ– ಕಾಲೇಜು ವಿದ್ಯಾರ್ಥಿಗಳು ಕೈಯಲ್ಲಿ ಕುಂಚ ಹಿಡಿದು ತಮ್ಮ ಕಲ್ಪನೆಗಳಿಗೆ ಬಣ್ಣ ತುಂಬುತ್ತಿದ್ದರು. ಪ್ರಕೃತಿ, ಚಿಟ್ಟೆಗಳು, ಸೂರ್ಯ, ಕಾಮನಬಿಲ್ಲು, ರಾಷ್ಟ್ರಧ್ವಜ, ದೇವರ ಚಿತ್ರ ಹೀಗೆ ಒಬ್ಬೊಬ್ಬರು ಒಂದೊಂದು ವಿಷಯದ ಕುರಿತು ತಮ್ಮ ಪ್ರತಿಭೆಗೆ ಅನುಗುಣವಾಗಿ ಚಿತ್ರ ಬರೆದರು.
ನಗರದ ಮಹಾರಾಜ ಉದ್ಯಾನದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಶಾಂತಲಾ ಆರ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಕಂಡು ಬಂದ ದೃಶ್ಯಗಳಿವು.
ಬೆಳಿಗ್ಗೆ 9.30ಕ್ಕೆ ಆರಂಭವಾದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವಿಧ ಶಾಲೆ, ಕಾಲೇಜುಗಳಿಂದ200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಲ್.ಕೆ.ಜಿ, ಯು.ಕೆ.ಜಿ, 1 ರಿಂದ 10ನೇ ತರಗತಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಮಹಿಳೆಯರಿಗೆ ಚಿತ್ರಕಲೆ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗೆ ಯಾವುದೇ ವಿಷಯ ನಿಗದಿ ಮಾಡಿರ ಲಿಲ್ಲ. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆ ಯನ್ನು ಸೋಮವಾರ ನಗರದ ಸಂಸ್ಕೃತ ಭವನದಲ್ಲಿ ನಡೆಯುವ ಮಹಿಳಾ ಕಲಾವಿದರ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮದಲ್ಲಿ ನೀಡಲಾಗುತ್ತದೆ.
ಅಂತರರಾಷ್ಟ್ರೀಯ ಚಿತ್ರ ಕಲಾವಿದ ಕೆ.ಟಿ. ಶಿವಪ್ರಸಾದ್, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ ಹಾಗೂ ಲೇಖಕಿ ಸುವರ್ಣಾ ಕೆ.ಟಿ.ಶಿವಪ್ರಸಾದ್ ಕಾರ್ಯಕ್ರಮಕ್ಕೆ ಆಗಮಿಸಿ ಮಕ್ಕಳು ಚಿತ್ರ ಬರೆಯುವುದನ್ನುವೀಕ್ಷಿಸಿದರು.
ಕಲಾವಿದ ಕೆ.ಟಿ. ಶಿವಪ್ರಸಾದ್ ಮಾತನಾಡಿ, ‘ಮಕ್ಕಳ ಚಿತ್ರಗಳನ್ನು ನೋಡುವುದು ಚಂದ, ಅವರಿಗೆ ಬರೆಯಲು ಬರದಿದ್ದರೂ ಏನೋ ಒಂದು ಬರೆಯುತ್ತಾರೆ. ಎಲ್ಲರೂ ಒಂದೇ ರೀತಿ ಬರೆಯುವುದಿಲ್ಲ. ಪ್ರತಿಯೊಬ್ಬರೂ ತಮ್ಮ ಆಲೋಚನೆಕ್ರಮಗಳಿಗೆ ಅನು ಗುಣವಾಗಿ ಒಂದೊಂದು ವಿಭಿನ್ನವಾಗಿ ಬರೆಯುತ್ತಾರೆ. ಅವರ ಕಲ್ಪನೆ ಏನಿರುತ್ತದೆ ಹಾಗೆ ಬರೆಯುತ್ತಾರೆ. ಮಕ್ಕಳಿಗೆ ಇದು ಒಳ್ಳೆಯ ವೇದಿಕೆ. ಹಾಸನದಲ್ಲಿ ಅನೇಕ ಚಿತ್ರಕಲಾ ಶಾಲೆಗಳಿವೆ. ಅ ಶಾಲೆಯ ಮಕ್ಕಳು ಇಂತಹ ಸ್ಪರ್ಧೆಗಳಲ್ಲಿ ಹೆಚ್ಚು ಭಾಗವಹಿಸಬೇಕು’ ಎಂದರು.