ಹಾಸನ: ನೂತನ ಶಿಲಾಮಯ ಮಾನಸ್ತಂಭೋಪರಿ ಚತುರ್ಮುಖ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಮಹೋತ್ಸವಮಾರ್ಚ್ 23ರಿಂದ 27ರವರೆಗೆ ನಗರದ ದೊಡ್ಡಬಸದಿ ಮತ್ತು ಎಂ.ಜಿ.ರಸ್ತೆಯ ರಾಮಕೃಷ್ಣ ಆಸ್ಪತ್ರೆ ಮುಂಭಾಗ ನಡೆಯಲಿದೆ ಎಂದು ಹಾಸನ ಜೈನ ಸಂಘದ ಅಧ್ಯಕ್ಷ ಎಂ.ಅಜಿತ್ ಕುಮಾರ್ ತಿಳಿಸಿದರು.
ದಾನಿಗಳ ನೆರವಿನೊಂದಿಗೆ ಪುಣ್ಯಸಾಗರ ಹಾಗೂ ವೀರಸಾಗರ ಮಹಾರಾಜರ ಸಾನಿಧ್ಯದಲ್ಲಿ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಸಿಂಹಾಸನಪುರಿ ಸಭಾಂಗಣದಲ್ಲಿಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 1,500 ಮಂದಿಗೆ ಊಟದ ವ್ಯವಸ್ಥೆಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
23ರ ಬೆಳಿಗ್ಗೆ ಗರ್ಭಕಲ್ಯಾಣ ನಡೆಯಲಿದೆ. ಮಧ್ಯಾಹ್ನ 3ಕ್ಕೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಶಾಸಕ ಪ್ರೀತಂ ಗೌಡಉದ್ಘಾಟಿಸಲಿದ್ದು, ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ ಎಂದರು.
24ರಂದು ಬೆಳಿಗ್ಗೆ ಜನ್ಮಕಲ್ಯಾಣ ನಡೆಯಲಿದ್ದು, ಮಧ್ಯಾಹ್ನ ನಡೆಯುವಕಾರ್ಯಕ್ರಮದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವಿರೇಂದ್ರ ಹೆಗ್ಗಡೆ ಭಾಗಿಯಾಗುವರು. 25ರಂದು ದೀಕ್ಷಾ ಕಲ್ಯಾಣ, ಮಧ್ಯಾಹ್ನದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿಶಾಖಾ ಮಠದ ಶಂಭುನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.
27ರಂದು ಮೋಕ್ಷ ಕಲ್ಯಾಣ ನಡೆಯಲಿದೆ. 850 ವರ್ಷದ ದಿಗಂಬರ ಜೈನ ದೊಡ್ಡಬಸದಿಯನ್ನು ₹ 1 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ₹ 3 ಕೋಟಿ ವೆಚ್ಚದಲ್ಲಿ ಜೈನ ಭವನ ನಿರ್ಮಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಆಹಾರ ಸಮಿತಿ ಅಧ್ಯಕ್ಷ ಧನ್ಪಾಲ್, ಅಜಿತ್ ಪ್ರಸಾದ್ ಇದ್ದರು.