ಶ್ರವಣಬೆಳಗೊಳ: ಸಮೀಪದ ಜಿನನಾಥಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಅಮೂಲ್ಯವಾದ ಪಂಚಲೋಹದ ಜಿನಮೂರ್ತಿಗಳ ಕಳ್ಳತನವಾಗಿದೆ.
ಚಂದ್ರಗಿರಿಯ ಚಿಕ್ಕಬೆಟ್ಟದ ಹಿಂಭಾಗದ ಜಿನನಾಥಪುರದಲ್ಲಿ ಗಂಗರ ಕಾಲದ ಪ್ರಾಚೀನ ಅರೆಗಲ್ ಪಾರ್ಶ್ವನಾಥ ಬಸದಿಯ ಕಿಟಕಿಯ ಸರಳನ್ನು ತುಂಡರಿಸಿ, ಒಳ ನುಗ್ಗಿ 3 ರಿಂದ 24 ಇಂಚಿನ ವಿವಿಧ ಅಳತೆಯ ಸುಮಾರು 22 ಮೂರ್ತಿಗಳ ಕಳ್ಳತನವಾಗಿದೆ. ಈ ಪೈಕಿ ಪಾರ್ಶ್ವನಾಥ ಸ್ವಾಮಿ, ಅನಂತನಾಥ ಸ್ವಾಮಿಗಳಲ್ಲಿ ಪ್ರಾಚೀನ ಹಾಗೂ ಕೆಲ ಇತ್ತೀಚಿನವು ಇದೆ.
24 ತೀರ್ಥಂಕರರ ಪ್ರಭಾವಳಿಯಲ್ಲಿ ಇರಿಸಲಾಗಿದ್ದ ಸಹಸ್ರಕೂಟ ಜಿನಬಿಂಬ, ಯಕ್ಷ ಯಕ್ಷಿಯರ ಬಿಂಬಗಳು, ಧರಣೇಂದ್ರ ಪದ್ಮಾವತಿ, ಕೂಷ್ಮಾಂಡಿನಿ, ಜ್ವಾಲಾಮಾಲಿನಿ, ನವ ದೇವತಾ ಬಿಂಬಗಳು, ಕುದುರೆ ಬ್ರಹ್ಮ ದೇವರ ಬಿಂಬ, ನಂದೀಶ್ವರ ಬಿಂಬಗಳು ಸೇರಿವೆ.
ನವರಾತ್ರಿ ದಸರಾ ಹಬ್ಬದ ಪ್ರಯುಕ್ತ ಜಿನಮೂರ್ತಿಗಳನ್ನು ಸ್ವಚ್ಛಗೊಳಿಸಿ ಇರಿಸಲಾಗಿತ್ತು ಎಂದು ಬಸದಿಯ ಪ್ರತಿಷ್ಠಾಚಾರ್ಯ ಎಸ್.ಡಿ.ನಂದಕುಮಾರ್ ಹೇಳಿದರು.
ಶ್ವಾನದಳ, ಬೆರಳಚ್ಚು ತಂಡ ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.