ಹಾಸನ: ನಗರಸಭೆ ಆಯುಕ್ತರಾಗಿದ್ದ ಬಿ.ಎ.ಪರಮೇಶ್ ಅವರನ್ನು ಹಾಸನ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಗೆ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಪರಮೇಶ್ ಅವರ ಸ್ಥಾನಕ್ಕೆ ಹಾಸನ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ ಅವರನ್ನು ನಿಯೋಜಿಸಲಾಗಿದೆ.
ಪರಮೇಶ್ ಅವರು ತಮ್ಮ ಸೇವಾವಧಿಯನ್ನು ಜಿಲ್ಲೆಯಲ್ಲಿಯೇ ಕಳೆದಿದ್ದಾರೆ. 10 ವರ್ಷಗಳ ಹಿಂದೆ ಹಾಸನ ನಗರಸಭೆ ಆಯುಕ್ತರಾಗಿದ್ದರು. ಕೆಲ ಅವಧಿಗೆ ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರೂ ಆಗಿದ್ದರು. ಕೆಲ ಕಾಲ ಚಿಕ್ಕಮಗಳೂರು ನಗರಸಭೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು.
ಪರಮೇಶ್ ಅವರು ಹುಟ್ಟೂರು ಆಲೂರು ತಾಲ್ಲೂಕಿನ ಭರತೂರು ಗ್ರಾಮ. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಕರ್ನಾಟಕ ನಾಗರೀಕ ಸೇವೆಗೆ ಆಯ್ಕೆಯಾಗಿದ್ದರು. ಈಗ ಅವರು ವಯೋ ನಿವೃತ್ತಿಯ ಸನಿಹದಲ್ಲಿದ್ದಾರೆ.
‘ ನನ್ನ ಮೇಲೆ ನಂಬಿಕೆ ಇಟ್ಟು ಜಿಲ್ಲೆಯ ಜವಾಬ್ದಾರಿ ನೀಡಲಾಗಿದೆ. ಇಷ್ಟು ದಿನ ನಗರಕ್ಕೆ ಸೀಮಿತವಾಗಿದೆ. ಜಿಲ್ಲಾ ಪಂಚಾಯಿತಿ ಸದಸ್ಯರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಲಹೆ, ಮಾರ್ಗದರ್ಶನ ಪಡೆದು ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು’ ಎಂದು ಪರಮೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.