ಹಾಸನ:ಭಾನುವಾರ ಹಾಸನಂಬ ದೇವಿ ದರ್ಶನಕ್ಕೆ ಬಂದಿದ್ದಅಂಗವಿಕಲರ ಅಧಿನಿಯಮದ ರಾಜ್ಯ ಆಯುಕ್ತ ಕೆ.ಎಸ್. ರಾಜಣ್ಣ ಅವರ ವಾಹನವನ್ನೇ ದೇವಾಲಯದ ಆವರಣದವರೆಗೂ ಪೊಲೀಸರು ಬಿಡಲಿಲ್ಲ. ಅಂಗವಿಕಲರಾಗಿರುವ ರಾಜಣ್ಣ ಅವರು ನಡೆದು ಬರಬೇಕಾಯಿತು.
ಗಾಲಿ ಕುರ್ಚಿಯ ಸಹಾಯವಿಲ್ಲದೇ ಕುಟುಂಬದೊಂದಿಗೆ ದರ್ಶನ ಪಡೆದು ಬಂದ ಅವರು, ದೇವಾಲಯದ ಆವರಣದಿಂದ ತಮ್ಮ ವಾಹನದ ಮೂಲಕ ಹೋಗಲು ಸಹ ಬಿಡದೇ ಪೊಲೀಸರು ತಡೆದರು.
ಈ ಸಂದರ್ಭದಲ್ಲಿ ರಾಜಣ್ಣ ಅವರು ಪೊಲೀಸರ ವರ್ತನೆ ವಿರುದ್ಧ ಅಸಮಾಧಾನ ಹೊರಹಾಕಿದರು. ದೇವಾಲಯದ ಆವರಣದಲ್ಲಿ ಅಂಗವಿಕಲರ ನೆರವಿಗೆ ಕೇವಲ ಒಂದು ಗಾಲಿ ಕುರ್ಚಿಯನ್ನು ಒದಗಿಸಲಾಗಿದ್ದು. ಒಂದಕ್ಕಿಂತ ಹೆಚ್ಚು ಮಂದಿ ಅಂಗವಿಕಲರು ಬಂದರೆ ದರ್ಶನ ಪಡೆಯುವುದು ಹರಸಾಹಸವಾಗಿದೆ. ರಾಜಣ್ಣ ಅವರನ್ನು ಕಂಡ ಸ್ಥಳೀಯ ಅಧಿಕಾರಿಗಳು ಎಲ್ಲಿಂದಲೊ ಒಂದು ಗಾಲಿ ಕುರ್ಚಿ ಚೇರ್ ತಂದು ಅವರನ್ನು ಕಾರಿನ ಬಳಿ ತಂದು ಬಿಟ್ಟರು.
ಅಂಗವಿಕಲರಿಗೆ, ವೃದ್ಧರಿಗೆ ಪ್ರತ್ಯೇಕ ದರ್ಶನ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದ್ದ ಜಿಲ್ಲಾಡಳಿತ, ಇದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದವು.