ಕೋವಿಡ್ ಹಿನ್ನೆಲೆಯಲ್ಲಿ ರಥೋತ್ಸವವನ್ನು ಸಾಂಕೇತಿಕವಾಗಿ ಆಚರಿಸಲಾಯಿತು. ಬೆಳಿಗ್ಗೆ ದೇವಸ್ಥಾನದಲ್ಲಿ ಪಾರುಪತ್ತೇದಾರ್ ರಮೇಶ್ ಭಟ್ ನೆಲ್ಲಿತೀರ್ಥ ಅವರ ಮುಖಂಡತ್ವದಲ್ಲಿ ವಿವಿಧ ಪೂಜಾ ವಿಧಾನಗಳು ನಡೆದವು. ಬಳಿಕ ದೊಡ್ಡ ತೇರು ಎಳೆಯದೇ ದೇವಸ್ಥಾನದ ಪ್ರಾಂಗಣದಲ್ಲಿ ಚಿಕ್ಕ ರಥದಲ್ಲಿ ದೇವರ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನೆರೆದಿದ್ದ ಭಕ್ತರು ಗೋವಿಂದ ನಾ ಸ್ಮರಣೆ ಮಾಡುತ್ತಾ ರಥ ಎಳೆದು ಪ್ರಾಂಗಣದಲ್ಲಿ ಮೂರು ಸುತ್ತ ಪ್ರದಕ್ಷಿಣೆ ಹಾಕಿ ಭಕ್ತಿ ಸಮರ್ಪಿಸಿದರು.
ಪ್ರಸನ್ನ ಸುಬ್ರಹ್ಮಣ್ಯೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ದೇವಸ್ಥಾನದಲ್ಲಿ ಒಂದು ತಿಂಗಳಿನಿಂದ ವಿವಿಧ ಧಾರ್ಮಿಕ ಕಾರ್ಯಗಳು ಸಾಂಗವಾಗಿ ನಡೆದವು. ರಾತ್ರಿ ವೇಳೆ ವಾಹನೋತ್ಸವ, ಕಾವೇರಿ ನದಿಯಲ್ಲಿ ತಪ್ಪೋತ್ಸವ ಮತ್ತು ಪಂಚಮಿ ಉತ್ಸವ ಸೇವೆ ಸಲ್ಲಿಸಲಾಯಿತು.
ನಾಡಿನ ವಿವಿಧ ಭಾಗಗಳಿಂದ ಪ್ರತಿನಿತ್ಯ ಸಾವಿರಾರು ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ದೇವಸ್ಥಾನದಲ್ಲಿ ಹಣ್ಣು ತುಪ್ಪ ನೈವೇದ್ಯ ಅರ್ಪಿಸಿ ಪ್ರಸಾದ ಸ್ವೀಕರಿಸಿದರು.
ಮಂಗಳವಾರ ಶ್ರೀ ಕ್ಷೇತ್ರದಲ್ಲಿ ಸಹಸ್ರಾರು ಭಕ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ತುಳು ಷಷ್ಠಿ ರಥೋತ್ಸವದೊಂದಿಗೆ ದೇವಸ್ಥಾನದಲ್ಲಿ ನಡೆಯುವ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು.